ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ಆಡಳಿತ ನಡೆಸಿದ ಅಕ್ರಮ ಗೂಡಂಗಡಿ ತೆರವು ಕಾರ್ಯಾಚರಣೆಯಿಂದ ಮಾನಸಿಕವಾಗಿ ಉದ್ವೇಗಕ್ಕೆ ಒಳಗಾದ ಬಡ ವ್ಯಾಪಾರಿ ರಾಮಕೃಷ್ಣ ಕಾಮತ್ (50) ಅವರು ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾದ ಘಟನೆ ನಡೆದಿದೆ.
ಘಟನೆ ವಿವರ
ರಾಮಕೃಷ್ಣ ಕಾಮತ್ ಅವರು ಕುಕ್ಕಾಜೆ ಪೇಟೆಯ ಒಂದು ಬದಿಯಲ್ಲಿ ತಳ್ಳು ಗಾಡಿ ಇಟ್ಟು ಸಣ್ಣ ಪ್ರಮಾಣದಲ್ಲಿ ಕ್ಯಾಂಟೀನ್ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದು, ಮಂಚಿ ಗ್ರಾಮ ಪಂಚಾಯತ್ ಯಾವುದೇ ಪೂರ್ವ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮತ್ ಅವರ ಕ್ಯಾಂಟೀನ್ ತಳ್ಳುಗಾಡಿಯನ್ನು ತೆರವುಗೊಳಿಸಿ ಪಂಚಾಯತ್ ಆವರಣದಲ್ಲಿ ತಂದು ನಿಲ್ಲಿಸಿದ್ದಾರೆ.
ದಂಡ ಪಾವತಿಸಿ ತಳ್ಳುಗಾಡಿ ಬಿಡಿಸಿಕೊಂಡು ಬರಲು ರಾಮಕೃಷ್ಣ ಕಾಮತ್ ಸಂಬಂಧಿಕರೊಂದಿಗೆ ಪಂಚಾಯತ್ ಆಫೀಸಿಗೆ ತೆರಳುತ್ತಾರೆ, ಅಲ್ಲಿ ಪಿಡಿಒ ಜೊತೆ ಮಾತನಾಡಿ ದಂಡದ ಮೊತ್ತವನ್ನು 5,000ರೂ.ನಿಂದ 2500ರೂ.ಗೆ ಕಡಿತ ಮಾಡುತ್ತಾರೆ. ಗಾಡಿ ಬಿಡಿಸಲು ಅಧ್ಯಕ್ಷರ ಸಹಿ ಮುಖ್ಯಎಂದು ಹೇಳುತ್ತಾರೆ. ಅಧ್ಯಕ್ಷರು ಸಹಿ ಹಾಕಲು ಒಪ್ಪದೆ, ರಾಮಕೃಷ್ಣ ಕಾಮತ್ರವರು ನನ್ನ ಛೇಂಬರ್ಗೆ ಬರಬೇಕು,ನನ್ನಲ್ಲಿ ಬಂದು ಮನವಿ ಕೊಡಬೆಕು ಹಾಗಾದರೆ ಮಾತ್ರ ಸಹಿ ಹಾಕುತ್ತೇನೆ ಮತ್ತು ದಂಡದ ಮೊತ್ತವನ್ನು ಇನ್ನು ಕಡಿತಗೊಳಿಸುತ್ತೇನೆ ಎಂದು ಷರತ್ತು ಹಾಕುತ್ತಾರೆ.
ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದ ಕಾರ್ಯಕರ್ತರಿಗೆ ಇಷ್ಟೇ ಬೆಲೆಯೇ ಎಂದು ತೀವ್ರ ಮನನೊಂದು ಯಾವುದೇ ಕಾರಣಕ್ಕೂ “ಅಧ್ಯಕ್ಷರ ಕಾಲಬುಡಕ್ಕೆ ನಾನು ಹೋಗುವುದಿಲ್ಲ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ ಸಹಿ ಹಾಕಲಿ, ಅಲ್ಲದೇ ನಾನು ವಯಸ್ಸಿನಲ್ಲಿ ಹಿರಿಯ, ಅಧ್ಯಕ್ಷರು ರಾಜಕೀಯಕ್ಕೆ ಬರುವ ಮೊದಲೇ ನಾನು ಪಕ್ಷಕ್ಕಾಗಿ ಸ್ವಂತ ಖರ್ಚಿನಲ್ಲಿ ದುಡಿದವ,ನನಗೆ ವಿಶ್ವಾಸ ದ್ರೋಹ ಮಾಡಿದ್ದಾರೆ, ನಾನು ಅವರ ಬಳಿಗೆ ಹೋಗುವುದಿಲ್ಲ” ಎಂದು ರಾಮಕೃಷ್ಣ ಕಾಮತ್ ಹೇಳಿದ್ದಾಗ ಅಧ್ಯಕ್ಷರು ಪಟ್ಟು ಬಿಡದೇ ಹಟ ಸಾಧಿಸುತ್ತಾರೆ.
ಇದರಿಂದ ಮಾನಸಿಕವಾಗಿ ತೀವ್ರ ಉದ್ವೇಗಕ್ಕೆ ಒಳಗಾಗಿ ಅಲ್ಲಿಂದ ಹೊರಟು ಮಂಚಿಗೆ ತಲುಪುವಷ್ಟರಲ್ಲಿ ಹಠಾತ್ ತೀವ್ರ ರಕ್ತದೊತ್ತಡ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.
ಇದೇ ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ಅಕ್ರಮ ವ್ಯವಹಾರ ನಡೆಸುತ್ತಿದ್ದರೂ ಕ್ರಮ ಜರುಗಿಸದ ಆಡಳಿತ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಸ್ಥಳೀಯರು ಪಂಚಾಯತ್ ಆಡಳಿತ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.