ಬಂಟ್ವಾಳ: ಜಾನುವಾರುಗಳನ್ನು ಹಿಂಸಾತ್ಮಾಕ ರೀತಿಯಲ್ಲಿ ಕಟ್ಟಿ ಹಾಕಿ ಗೂಡ್ಸ್ ರಿಕ್ಷಾ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಎಸ್ ಐ ಹರೀಶ್ ನೇತೃತ್ವದ ಪೋಲಿಸ್ ತಂಡ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಹಾಗೂ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದು, ಅಬ್ಬಾಸ್ ಮೂಲೆ ಮನೆ ಪರಾರಿಯಾಗಿದ್ದಾನೆ. ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಮನೆಕಳ್ಳತನ ಹಾಗೂ ದನ ಕಳ್ಳತನ ಪ್ರಕರಣಗಳನ್ನು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣಾ ಎಸ್. ಐ ಹರೀಶ್ ನೇತೃತ್ವದ ತಂಡ ರಾತ್ರಿ ರೌಂಡ್ಸ್ ಕಾರ್ಯಚರಣೆ ನಡೆಸುತ್ತಿದ್ದರು.
ಈ ವೇಳೆ ಬೆಳಗ್ಗಿನ ಜಾವ 5 ಗಂಟೆಗೆ ಮಂಚಿಕಟ್ಟೆಯಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲು ಮುಂದಾದಾಗ ಚಾಲಕ ವಾಹನ ನಿಲ್ಲಿಸದೆ ಮುಂದೆ ಹೋದ, ಕೂಡಲೆ ವಾಹನ ಬೆನ್ನಟ್ಟಿ ತಡೆದು ನಿಲ್ಲಿಸಿದಾಗ ಚಾಲಕನ ಬದಿಯ ಸೀಟಿನಲ್ಲಿ ಕುಳಿತ ಆರೋಪಿ ಟೆಂಪೋದಿಂದ ಹಾರಿ ಓಡಿ ಹೋಗಿದ್ದಾನೆ.
ಅದಾಗಲೇ ಕಾರ್ಯಪ್ರವೃತ್ತರಾದ ಪೋಲಿಸರು ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಟೆಂಪೋದಲ್ಲಿ ಒಂದು ದನ ಹಾಗೂ ಎರಡು ಗಂಡು ಕರುಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನಗಳನ್ನು ವದೆ ಮಾಡುವ ಉದ್ದೇಶದಿಂದ ಸಾಗಿಸುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಒಂದು ದನ ಮತ್ತು ಎರಡು ಕರುಗಳ ಜೊತೆ ಟೆಂಪೋ ಸಹಿತ ಜಾನುವಾರುಗಳ ಒಟ್ಟು ಮೌಲ್ಯ 1,50,000 ಆಗಿದೆ.