

ಬಂಟ್ವಾಳ: ಅಮ್ಟೂರು ಗ್ರಾಮದ ರಾಯಪ್ಪಕೋಡಿ ಖಾಸಗಿ ಸಂಸ್ಥೆಯೊಂದರ ಮುಂದೆ ನಿಲ್ಲಿಸಿದ್ದ ಪಿಕಪ್ ಹಾಗೂ ಲಕ್ಷಾಂತರ ಬೆಲೆ ಬಾಳುವ ವಿವಿಧ ಸೊತ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಕಾಸರಗೋಡು ಮಂಜೇಶ್ವರ ನಿವಾಸಿಗಳಾದ ಲತೀಶ್ ಜೋಗಿ, ವಿಶ್ವನಾಥ್ ಮತ್ತು ರವಿಕಿರಣ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಕೈಯಿಂದ ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎ.6 ರಂದು ಮುಂಜಾನೆ ಅಮ್ಟೂರು ಗ್ರಾಮದ ರಾಯಪ್ಪಕೋಡಿಯ ವರ್ಕ್ ಶಾಪ್ ಮುಂಭಾಗ ನಿಲ್ಲಿಸಿದ್ದ ಪಿಕಪ್ ವಾಹನ ಹಾಗೂ ಸಂಸ್ಥೆಯ ವೆಲ್ಡಿಂಗ್ ಮೆಷಿನ್ ನ್ನು ಯಾರೋ ಕಳ್ಳರು ಕಳವುಗೈದಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅವರ ನೇತ್ರತ್ವದಲ್ಲಿ ಪೋಲೀಸ್ ಉಪನಿರೀಕ್ಷಕ ಅವಿನಾಶ್ ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಅವರ ಎರಡು ತಂಡ ಪ್ರಕರಣ ದ ತನಿಖೆ ನಡೆಸಿ 48 ಗಂಟೆಗಳ ಒಳಗಾಗಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 2,30000 ರೂ.ಮೌಲ್ಯದ ಪಿಕಪ್ ವಾಹನ,5000 ಮೌಲ್ಯದ ವೆಲ್ಡಿಂಗ್ ಮೆಷಿನ್,1.500 ಮೌಲ್ಯದ ಕಂಪ್ಯೂಟರ್ ಮಾನಿಟರ್, 7,020 ನಗದು, ಕೃತ್ಯಕ್ಕೆ ಬಳಸಲಾದ 35,000 ಮೌಲ್ಯದ ಬೈಕ್ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಶ್ ಭಗವಾನ್ ಸೋನಾವಣೆ ಮತ್ತು ಮಾನ್ಯ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರರವರ ಮಾರ್ಗದರ್ಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ರವರ ನಿರ್ದೇಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ವಿವೇಕಾನಂದರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರರಾದ ಅವಿನಾಶ್ ಮತ್ತು ಕಲೈಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣ, ಇರ್ಷಾದ್, ಮನೋಹರ್, ಗಣೇಶ್, ರಾಘವೇಂದ್ರ, ನಾಗರಾಜ್, ಮೋಹನ್ ರವರನ್ನ ಒಳಗೊಂಡ ಎರಡು ತಂಡಗಳನ್ನು ರಚಿಸಿಕೊಂಡು ಆರೋಪಿ ಪತ್ತೆಗೆ ಶ್ರಮಿಸಿರುತ್ತಾರೆ.










