ಬಂಟ್ವಾಳ: ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಟಿಪ್ಪರ್ ಹತ್ತಿಸಲು ಪ್ರಯತ್ನಿಸಿದ ಘಟನೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಶೇಖರ್ ಚೌಗಾಲಾ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ವೇಣುಗೋಪಾಲ್ ಎಂಬುವವರು ಪರಂಗೀಪೇಟೆ ಹೊರಠಾಣೆ ಮತ್ತು ಚೆಕ್ ಪೋಸ್ಟ್’ನಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡಿಕೊಂಡಿದ್ದ ಸಮಯ ಸುಮಾರು ಮಧ್ಯರಾತ್ರಿ 02.20 ಗಂಟೆಗೆ ಮಂಗಳೂರು ಕಡೆಯಿಂದ ಟಿಪ್ಪರ್ ಲಾರಿ (KA 51 C 6229) ಯೊ0ದು ವೇಗವಾಗಿ ಬರುತ್ತಿದ್ದು, ಕಂಡು ಪೊಲೀಸರು ಬ್ಯಾಟನ್ ಹಾಗೂ ಟಾರ್ಚ್ ಲೈಟ್ ಸಹಾಯದಿಂದ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಈ ವೇಳೆ ಟಿಪ್ಪರ್ ಲಾರಿಯವ ಪೊಲೀಸರ ಸೂಚನೆಗೆ ಒಂಚೂರು ಗಮನಹರಿಸದೇ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಪೊಲೀಸರ ಮೇಲೆ ಹತ್ತಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆ ಸಮಯ ಪೊಲೀಸ್ ಕಾನ್ ಸ್ಟೇಬಲ್ ಹಾಗೂ ಹೋಮ್ ಗಾರ್ಡ್ ಕೂಡಲೇ ತಪ್ಪಿಸಿಕೊಂಡು ಬದಿಗೆ ಸರಿದಿದ್ದಾರೆ. ನಂತರ ಅದರ ಹಿಂದೆಯೇ ಮಂಗಳೂರು ಕಡೆಯಿಂದ ಆಲ್ಟೋ ಕಾರೊಂದು (KA19 MC 2269) ಬಂದಿದ್ದು ಅದು ಕೂಡ ಸೂಚನೆಗೆ ನಿಲ್ಲಿಸದೇ ಇದ್ದು, ಆ ಕಾರಿನಲ್ಲಿ ಡ್ರೈವರ್ ಪಕ್ಕದಲ್ಲಿ ಕುಳಿತ್ತಿದ್ದವನು ನಿಮಗೆ ಎಷ್ಟು ಧೈರ್ಯ ನಮ್ಮ ಲಾರಿಯನ್ನು ನಿಲ್ಲಿಸುತ್ತೀರಾ ಲೋಫರ್ಸ್ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಾರನ್ನು ನಿಲ್ಲಿಸದೇ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮಾತ್ರವಲ್ಲದೆ ಅವ್ಯಾಚ ಶಬ್ಧಗಳಿಂದ ನಿಂದಿಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.