ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿಯಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ನಷ್ಟವುಂಟಾಗಿದೆ.
ಪುಣ್ಕೆದಡಿ ನಿವಾಸಿ ಲೋಕೇಶ್ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದ್ದು, ಮನೆಮಂದಿ ಸಂಬಂಧಿಕರ ಮನೆಗೆ ಹೋಗಿದ್ದ ಕಾರಣ ಜೀವಹಾನಿ ಸಂಭವಿಸಿಲ್ಲ.
ಮನೆಯಲ್ಲಿದ್ದ ಟಿವಿ, ಪ್ರಿಡ್ಜ್, ಗ್ರೈಂಡರ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳು, ಬಟ್ಟೆ ಬರೆಗಳು, ಮನೆಯ ದಾಖಲೆ ಪತ್ರಗಳು, ಸಾವಿರಾರು ರೂಪಾಯಿ ನಗದು, ಜತೆಗೆ ಕ್ಯಾಟರಿಂಗ್ ಉದ್ಯಮದ ಪಾತ್ರೆಗಳು, ಇನ್ನಿತರ ಉತ್ಪನ್ನಗಳು ಸಂಪೂರ್ಣ ಭಸ್ಮವಾಗಿದೆ. ನಷ್ಟವಾದ ಸೊತ್ತುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಲೋಕೇಶ್ ಅವರು ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದು, ಮನೆಯ ಪಕ್ಕದ ಕೋಣೆಯಲ್ಲಿ ಅದರ ಪಾತ್ರೆಗಳು, ಬಟ್ಟಲುಗಳು, ಜತೆಗೆ ಇನ್ನಿತರ ಉತ್ಪನ್ನಗಳನ್ನು ಇರಿಸಿದ್ದರು. ಜತೆಗೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಡುಗೆಗಳನ್ನೂ ಸಿದ್ಧಪಡಿಸಿ ಮಲಗಿದ್ದರು. ಹೀಗಾಗಿ ಎಲ್ಲಾ ಕಡೆ ಪಾತ್ರೆ ಇರಿಸಿದ್ದ ಕಾರಣಕ್ಕೆ ಪಕ್ಕದ ಸಂಬಂಧಿಕರ ಮನೆಯಲ್ಲಿ ಮಲಗಿದ್ದರು. ತಡರಾತ್ರಿ ೨ ಗಂಟೆಯ ವೇಳೆ ಭಾರಿ ಗಾತ್ರದ ಶಬ್ದ ಕೇಳಿ ಓಡಿ ಬಂದಾಗ ಸಿಡಿಲು ಬಡಿದು ಬೆಂಕಿ ಹತ್ತಿ ಉರಿಯುತ್ತಿತ್ತು. ಆದರೆ ಆದಾಗಲೇ ಬಹುತೇಕ ಸೊತ್ತುಗಳು ಸುಟ್ಟು ಭಸ್ಮವಾಗಿದೆ.