ಬಂಟ್ವಾಳ: ವಾಕ್ಸಿನೇಷನ್ ನಡೆಯುತ್ತಿದ್ದ ವೇಳೆ ಆಶಾಕಾರ್ಯಕರ್ತೆಯೋರ್ವರ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬಡಗಬೆಳ್ಳೂರು ಪಂಚಾಯತ್ ನಲ್ಲಿ ನಡೆದಿದೆ.
ಆಗಸ್ಟ್ 21ರಂದು ಬಡಗಬೆಳ್ಳೂರು ಪಂಚಾಯತ್ ನಲ್ಲಿ ಸಾರ್ವಜನಿಕ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಯುತ್ತಿದ್ದು ರೇವತಿ ಎಂಬವರು ಆಶಾಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ತಂದೆ ಗೋಪಾಲ ಎಂಬಾತ ಆಶಾಕಾರ್ಯಕರ್ತೆ ರೇವತಿಯವರ ಮೇಲೆ ವಿನಾಕಾರಣ ಆರೋಪ ಮಾಡಿ ಮತ್ತು ಮನಸ್ಸಿಗೆ ನೋವಾಗುವ ರೀತಿಯಲ್ಲಿ ಬೈದು ನಿಂದಿಸಿ, ಮಾನಸಿಕ ಹಿಂಸೆ ನೀಡಿ ಹೋಗಿದ್ದಾನೆ. ಆ ಕೂಡಲೇ ರೇವತಿಯವರಿಗೆ ತಾಲೂಕು ಬಿಜೆಪಿ ಅಧ್ಯಕ್ಷ ದೇವಪ್ಪ ಎಂಬವರು ಕರೆ ಮಾಡಿದ್ದು ಈ ವೇಳೆ ರೇವತಿಯವರು ಎಲ್ಲರಿಗೂ ಕೇಳಿಸುವಂತೆ ಮೊಬೈಲ್ ಫೋನ್ ನ ಸ್ಪೀಕರ್ ಆನ್ ಮಾಡಿ ಇಟ್ಟಿದ್ದಾರೆ, ಆವಾಗ ಜನಾರ್ಧನ ಎಂಬವರು ಅವರ ಪೋನನ್ನು ಅವರ ಕೈಯಿಂದ ತೆಗೆದುಕೊಂಡು ತಾನು ಮಾತನಾಡುವುದಾಗಿ ಹೇಳಿ ಹೊರಗೆ ಹೋಗಿ ದೇವಪ್ಪರವರಲ್ಲಿ ಮಾತನಾಡುತ್ತಿರುತ್ತಾರೆ.
ಈ ಸಂದರ್ಭದಲ್ಲಿ ರೇವತಿಯವರ ಪತಿ ರತ್ನಾಕರ್ ಹಾಗೂ ಮಗ ಸಂದೇಶ್, ಜನಾರ್ಧನ, ನರ್ಸ್ ದೇವಕಿ, ಜ್ಞಾನ, ಹಮೀದ್, ರಫೀಕ್ ಮುಂತಾದವರು ಇದ್ದರು. ಉಪಾಧ್ಯಕ್ಷರಾದ ಮಮತಾ, ರೇವತಿಯವರ ಮೇಲೆ ಇಲ್ಲಸಲ್ಲದ ಆರೋಪ ಮೊದಲೇ ಮಾಡಿದ್ದು ವಿನಾಕಾರಣ ಅವರ ಮೇಲೆ ದ್ವೇಷ ಕಟ್ಟಿಕೊಂಡು ರೇವತಿಯವರು ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಲ್ಲದೆ, ಗೋಪಾಲ ವಾಕ್ಸಿನ್ ಮುಗಿದ ಬಳಿಕ ಪಂಚಾಯತ್ ಎದುರುಗಡೆ ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀರು ಬಿಡುವ ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ರೇವತಿಯವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಾಯಿಸದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತ ದಿನೇಶ್ ಎಂಬವರು ಸ್ಥಳಕ್ಕೆ ಬಂದು ಹಲ್ಲೆಗೆ ಯತ್ನಿಸುತ್ತಿರುವುದನ್ನು ತಡೆದು ಗೋಪಾಲನನ್ನು ಎಳೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಪಂಚಾಯತ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದ ದಿನವೇ ಆಶಾಕಾರ್ಯಕರ್ತೆ ರೇವತಿಯವರು ಮೆಡಿಕಲ್ ಆಫೀಸರ್ ಆಗಿರುವ ಡಾ. ಅನ್ಸಿಲ್ಲಾ ಪತ್ರವೋ ಅವರಿಗೆ ಕರೆ ಮಾಡಿ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಮರು ದಿನ ಬೆಳಗ್ಗೆ ಬಂಟ್ವಾಳ ಹೆಲ್ತ್ ಆಫೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಅವರು ಬೆಂಜನಪದವು ಮೆಡಿಕಲ್ ಆಫೀಸರ್ ಗೆ ಸುತ್ತೋಲೆ ಕಳುಹಿಸುತ್ತೇನೆ ವಾಕ್ಸಿನೇಷನ್ ಆಗುವ ಸ್ಥಳಕ್ಕೆ ಬೇರೆ ಯಾರಿಗೂ ಪ್ರವೇಶವಿಲ್ಲ ವಾಕ್ಸಿನ್ ಪಡೆದುಕೊಳ್ಳುವವರು ಮತ್ತು ವಾಕ್ಸಿನ್ ಹಾಕುವ ಕಾರ್ಯಕರ್ತರಿಗೆ ಮಾತ್ರ ಪ್ರವೇಶವೆಂದು ಹೇಳಿ ಈ ವಿಷಯದ ಬಗ್ಗೆ ಎಸ್. ಐ ಗೆ ಮತ್ತು ತಹಶೀಲ್ದಾರ್ ಗೆ ತಿಳಿಸುತ್ತೇನೆಂದು ರೇವತಿಯವರ ಬಳಿ ಹೇಳಿ ಸ್ಟೇಷನ್ ಗೆ ದೂರು ದಾಖಲಿಸಲು ಹೇಳಿರುತ್ತಾರೆ. ಈ ಕುರಿತು ಆಶಾಕಾರ್ಯಕರ್ತೆ ರೇವತಿಯವರು ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.