ಬಂಟ್ವಾಳ: ಮಾಜಿ ಸಚಿವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ನಾಮ ಪತ್ರಸಲ್ಲಿಕೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಪಕ್ಷದಲ್ಲಿ 9ನೇ ಭಾರಿ ಸ್ಪರ್ಧಿಸುತ್ತಿರುವ ರಮಾನಾಥ ರೈ 6 ಬಾರಿ ಶಾಸಕನಾಗಿ, 3 ಬಾರಿ ಸಚಿವರಾಗಿ ಕಾಂಗ್ರೇಸ್ ಪಕ್ಷದಲ್ಲಿ ಪಕ್ಷ ನಿಷ್ಠೆಯಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷವನ್ನು ಕಟ್ಟುವ ಕೆಲಸದ ಜೊತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮಾನಾಥ ರೈ ನಾಮಪತ್ರ ಸಲ್ಲಿಸುವ ಮೊದಲು ನಂದಾವರ ದೇವಸ್ಥಾನ, ಮಿತ್ತಬೈಲು ಮಸೀದಿ, ಮೊಡಂಕಾಪು ಚರ್ಚ್, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಬಿಸಿರೋಡಿಗೆ ಆಗಮಿಸಿದರು.
ಬಳಿಕ ಬಿ.ಸಿರೋಡಿನ ಫ್ಲೈ ಓವರ್ ನ ಅಡಿಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ “ನನ್ನ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಪಕ್ಷದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ಕ್ಷೇತ್ರದ ಮತದಾರರಿಗೆ ಅಗೌರವ ತೋರುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕಾಗಿದೆ” ಎಂದು ಹೇಳಿದರು. ಬಳಿಕ ಬಿಸಿರೋಡಿನ ಆಡಳಿತ ಸೌಧದ ಕಚೇರಿಗೆ ಹೋಗಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಶಕುಂತಲಾ ಶೆಟ್ಠಿ, ರಾಕೇಶ್ ಮಲ್ಲಿ, ಅಶ್ವಿನ್ ಕುಮಾರ್ ರೈ, ಎ.ಸಿ.ಭಂಡಾರಿ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ,ಜಯಂತಿ ಎಸ್.ಪೂಜಾರಿ, ಮಾಯಿಲಪ್ಪ ಸಾಲಿಯಾನ್, ಭಾರತಿ ರಾಜೇಂದ್ರ, ಜಾಸ್ಮಿನ್, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯ ಉದ್ದಕ್ಕೂ ರಮಾನಾಥ ಅವರ ಧರ್ಮಪತ್ನಿ ಧನಭಾಗ್ಯ ಆರ್.ರೈ ಜೊತೆಗಿದ್ದರು.