


ಬಜಪೆ: ಅತ್ಯಾಚಾರ ಯತ್ನದ ಆರೋಪದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲ್ಲೂಕಿನ ಮೊಗರು ಗ್ರಾಮದ ನಿವಾಸಿ ಹಸನಬ್ಬ ಅಲಿಯಾಸ್ ನೌಶದ್ (30) ಬಂಧಿತ ಆರೋಪಿ.

2013ರ ಮಾರ್ಚ್ 22ರಂದು ಮೊಗರು ಗ್ರಾಮದ ಕುಕ್ಕಟ್ಟೆ ಎಂಬಲ್ಲಿ ಮಹಿಳೆಯ ಮಾನಭಂಗದ ಆರೋಪ ಹಾಗೂ ಪ್ರಕರಣ ವಾಪಸ್ ಪಡೆಯಲು ಕೊಲೆ ಬೆದರಿಕೆ ಆರೋಪ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಅಜರುದ್ದೀನ್ ಮತ್ತು ಹಸನಬ್ಬ ಅಲಿಯಾಸ್ ನೌಶದ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿಗಳ ಪೈಕಿ ನೌಶದ್ ವಿಚಾರಣೆಗೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಬಜಪೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತವರ ತಂಡವು ಆರೋಪಿಯನ್ನು ಕಾಪುನಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈತನ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 5ಕ್ಕೂ ಅಧಿಕ ಸುಲಿಗೆ ಪ್ರಕರಣ ದಾಖಲಾಗಿದೆಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಎ.ಎಸ್ಐ ರಾಮಣ್ಣ ಪೂಜಾರಿ ಮತ್ತು ಸಿಬ್ಬಂದಿ ರೋಹಿತ್ ಹಳೆಯಂಗಡಿ ಭಾಗವಹಿಸಿದ್ದರು.
