ಉಡುಪಿ: ಕಳ್ಳತನ ಪ್ರಕರಣದ ಆರೋಪಿಯನ್ನು ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತಪ್ಪಿಸಿಕೊಂಡು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಪ್ರಕರಣದ ವಿವರ:
ಕೆಲವು ತಿಂಗಳ ಹಿಂದೆ ಬೀಜಾಡಿ, ಸಮೀಪ ನಡೆದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರು ರಾಹಿಕ್ನನ್ನು ಬಂಧಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಂತೆ ಪ್ರಕರಣದ ತನಿಖಾಧಿಕಾರಿಯವರು ಅ. 20ರಂದು ಆರೋಪಿಯನ್ನು ಕುಂದಾಪುರದ ಎ.ಪಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗ್ರಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು.
ಅದರಂತೆ ಕುಂದಾಪುರದಿಂದ ಹೊರಟು ಗುರುವಾರ ರಾತ್ರಿ ಸುಮಾರು 7.30ಕ್ಕೆ ಜಿಲ್ಲಾ ಕಾರಾಗೃಹ ಕಾಜರಗುತ್ತು ಮುಖ್ಯದ್ವಾರದ ಬಳಿ ತಲುಪಿ, ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಆರೋಪಿ ಪೊಲೀಸ್ ಸಿಬ್ಬಂದಿಗಳನ್ನು ತಳ್ಳಿ ಅವರ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ನಿರ್ಲಕ್ಷ್ಯ:
ಆರೋಪಿಗಳನ್ನು ಜೈಲಿಗೆ ಕಳುಹಿಸುವ ವೇಳೆ ಬೇಡಿ (ಕೋಲ) ಹಾಕಬೇಕೆಂದು ಕಾನೂನು ತಿಳಿಸುತ್ತದೆ. ಆದರೆ ಪೊಲೀಸರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ. ಖಾಸಗಿ ವಾಹನದಲ್ಲಿ ಹೆಡ್ಕಾನ್ಸ್ಸ್ಟೇಬಲ್ ಮಂಜುನಾಥ್ ಹಾಗೂ ಪಿಸಿ ಬಸವನ ಗೌಡ ಅವರು ಆರೋಪಿಯನ್ನು ಕರೆದುಕೊಂಡು ಬಂದಿದ್ದರು.
ಮೇಲ್ನೋಟಕ್ಕೆ ಪೊಲೀಸರನಿರ್ಲಕ್ಷ್ಯವೇ ಆರೋಪಿ ತಪ್ಪಿಸಿಕೊಳ್ಳಲು ಕಾರಣ ಎನ್ನಲಾಗಿದೆ. ಆರೋಪಿಯ ಮೇಲೆ ಈ ಹಿಂದೆಯೂ ಕುಂದಾಪುರ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇಬ್ಬರು ಪೊಲೀಸರನ್ನು ಅಮಾನತು ಮಾಡುವ ಸಾಧ್ಯತೆಗಳಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇನ್ನಷ್ಟೇ ಆದೇಶ ಹೊರಡಿಸಬೇಕಿದೆ.