ಶಿವಮೊಗ್ಗ: ಸಾಗರ ಪಟ್ಟಣದ ನೆಹರೂ ನಗರದ ಬಜರಂಗದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿ ಸಮೀರ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳನ್ನು ಸಮೀರ್ ಮನ್ಸೂರ್ ಹಾಗೂ ಇಮಿಯಾನ್ ಎನ್ನಲಾಗಿದೆ.
ಮನ್ಸೂರ್ ಮತ್ತು ಇಮಿಯಾನ್ ಈ ಘಟನೆಯಲ್ಲಿನ ಪಾತ್ರದ ಬಗ್ಗೆ ವಿಚಾರಣೆ ಮತ್ತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರು ಸೋಮವಾರ ಬೆಳಗ್ಗೆ ಬೈಕ್ನಲ್ಲಿ ತಮ್ಮ ಮನೆಯಿಂದ ಬಿ.ಎಚ್.ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಂಗಡಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಸಮೀರ್ ಹತ್ತಿರ ಬಂದು ತಲ್ವಾರ್ ಬೀಸಿದ್ದಾನೆ. ಅದೃಷ್ಟವಶಾತ್ ಸುನಿಲ್ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಬಳಿಕ ಸುನಿಲ್ ಅಲ್ಲಿಂದ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಗೆಳೆಯರಿಗೆ ವಿಷಯ ತಿಳಿದಿದ್ದರು. ಸಮೀರ್ ಕೂಡಾ ಸುನಿಲ್ ಹೋದ ದಾರಿಯಲ್ಲೇ ಸಾಗಿದ್ದನಾದರೂ ನಂತರ ಕಣ್ಮರೆಯಾಗಿದ್ದ.
ಸಾಗರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಗೆ ಯತ್ನ ಹಿನ್ನೆಲೆ ಇಂದು ಸಾಗರ ಬಂದ್ ಗೆ ಕರೆ ನೀಡಲಾಗಿದೆ. ಬೈಕ್ ನಲ್ಲಿ ಬಂದ ಬಜರಂಗದಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಸಮೀರ್ನನ್ನು ವಶಕ್ಕೆ ಪಡೆದಿದ್ದಾರೆ. ಆತನ ಪ್ರಾಥಮಿಕ ವಿಚಾರಣೆ ನಡೆಸಿ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಸಮೀರ್ನ ಉದ್ದೇಶವೇನಿತ್ತು ಎನ್ನುವುದು ತನಿಖೆ ನಂತರ ಬಯಲಾಗಬೇಕಾಷ್ಟೆ.