ದಾವಣಗೆರೆ: ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ನಂತರ ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ದಾವಣಗೆರೆ ತಾಲೂಕಿನ ಮ್ಯಾಸರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮ್ಯಾಸರಹಳ್ಳಿಯ ಪ್ರಭು ಹಾಗೂ ಕುಂದುವಾಡದ ಕಿರಣ್ ಅತ್ಯಾಚಾರ ಮಾಡಿದ ಆರೋಪಿಗಳು.
25 ವರ್ಷದ ಮಹಿಳೆ ಮೇಲೆ ಈ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಮ್ಯಾಸರಹಳ್ಳಿ ಗ್ರಾಮದ ಹೊರವಲಯದಲ್ಲಿ ಮಹಿಳೆಯು ತೊಗರಿ ಹಾಕಿದ್ದರು. ಆ ವೇಳೆಗೆ ಅಲ್ಲಿಗೆ ಬಂದ ಕಿರಣ್ ಹಾಗೂ ಪ್ರಭು ಮಹಿಳೆಯನ್ನು ಹೆದರಿಸಿ ಜಮೀನಿಗೆ ಕರೆದುಕೊಂಡು ಹೋಗಿ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಇದಾದ ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮಹಿಳೆಯ ಕೂಗಾಟ ಕೇಳಿದ ಸಂಬಂಧಿಯೊಬ್ಬರು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.
ಅಲ್ಲದೆ ಜಮೀನಿನಲ್ಲಿ ಮಹಿಳೆಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಈ ವೇಳೆ ಮಹಿಳೆಯ ಸಂಬಂಧಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ