ಮುನ್ನಾರ್: ಬೆಕ್ಕಿನ ಮರಿಯನ್ನು ಹುಲಿಮರಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸಿದ್ದ ಅಪರೂಪದ ಕೃತ್ಯ ಬೆಳಕಿಗೆ ಬಂದಿದೆ.
ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಯುವಕನೊಬ್ಬನನ್ನುಕೇರಳದ ಇಡುಕ್ಕಿಯಲ್ಲಿ ಬಂಧಿಸಲಾಗಿದೆ . ತಮಿಳುನಾಡಿನ ಗಡಿ ಗ್ರಾಮವಾದ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ಥಿಬನ್ (24) ಎಂಬ ವ್ಯಕ್ತಿಯೇ ಬೆಕ್ಕಿಗೆ ಹುಲಿ ಮರಿಯ ಬಣ್ಣ ಬಳಿದು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ಬಂಧಿಸಿದ ಆರೋಪಿ .
ಮೂರು ತಿಂಗಳ ವಯಸ್ಸಿನ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವ್ಯಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದ. ಪ್ರತಿಮರಿಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದು, ಖರೀದಿದಾರರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ ಬೌಲ್ನಲ್ಲಿ ಹುಲಿಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.
ಈ ವಿಷಯ ತಿಳಿದ ಅರಣ್ಯ ಇಲಾಖೆ ಹೀಗೆ ಸಂದೇಶ ರವಾನಿಸುತ್ತಿದ್ದ ವ್ಯಕ್ತಿಯ ಬೆನ್ನು ಬಿದ್ದಿತ್ತು.ಅರಣ್ಯಾಧಿಕಾರಿಗಳು ಆತನನ್ನು ಹುಡುಕುತ್ತಿರುವ ಬಗ್ಗೆ ಮಾಹಿತಿ ಪಡೆದ ಪಾರ್ಥಿಬನ್ ಪರಾರಿಯಾಗಿದ್ದ. ಅರಣ್ಯಾಧಿಕಾರಿಗಳು ಇವರ ಮನೆಯಲ್ಲಿ ಹುಡುಕಾಟ ನಡೆಸಿದ್ದು ಹುಲಿ ಮರಿಗಳು ಪತ್ತೆಯಾಗಿಲ್ಲ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ವಿಚಾರಣೆ ವೇಳೆ ಅಂಬತ್ತೂರಿನ ಈತನ ಸ್ನೇಹಿತ ಹುಲಿ ಮರಿ ಚಿತ್ರಗಳನ್ನು ವಾಟ್ಸಾಪ್ನಲ್ಲಿ ಹಾಕುವಂತೆ ಫೋಟೋಗಳನ್ನು ನೀಡಿದ್ದ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಬೆಕ್ಕಿನ ಮರಿಗಳಿಗೆ ಹುಲಿ ಬಣ್ಣ ಬಳಿದು ಅವುಗಳನ್ನು ಹುಲಿಮರಿಗಳನ್ನಾಗಿ ತೋರ್ಪಡಿಸುವ ಉದ್ದೇಶ ಅವರದ್ದಾಗಿತ್ತು ಎನ್ನಲಾಗಿದೆ.