ಬೆಳ್ತಂಗಡಿ: ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ತಾಳಿ ಕಟ್ಟುವ ವೇಳೆ ವಿಚಿತ್ರ ಕಾರಣಗಳಿಗಾಗಿ ಮುರಿದುಬಿದ್ದ ಘಟನೆಯೊಂದು ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಯುವಕನೋರ್ವನ ಮದುವೆಯು ಮೂಡುಕೊಣಾಜೆ ಮೂಲದ ಯುವತಿಯೊಂದಿಗೆ ನಾರಾವಿಯ ದೇವಾಲಯವೊಂದರ ಸಮೀಪದಲ್ಲಿರುವ ಸಭಾಭವನದಲ್ಲಿ ನಿಗದಿಯಾಗಿತ್ತು. ಅದರಂತೆ ಅದ್ಧೂರಿ ಮದುವೆಗೆ ಅತಿಥಿಗಳು, ಹಿತೈಷಿಗಳು ಸೇರಿ ಸುಮಾರು 500 ಕ್ಕೂ ಹೆಚ್ಚು ಮಂದಿಯ ಭೋಜನವೂ ತಯಾರಾಗಿತ್ತು. ಎಲ್ಲವೂ ಸಾಂಗವಾಗಿ ನಡೆದಿತ್ತು.
ಆದರೆ ಮದುಮಗ ವಧುವಿನ ಕುತ್ತಿಗೆಗೆ ಇನ್ನೇನು ಹಾರ ಹಾಕಬೇಕಿತ್ತು ಅಷ್ಟಾರಲ್ಲಿ ಶುರುವಾಯಿತು ಜಗಳ, ವರ ಹಾರ ಹಾಕುವಾಗ ಕೈ ತಾಗಿಸಿದ ಎನ್ನುತ್ತಾ ವಧು ತಗಾದೆ ತೆಗೆದಿದ್ದಾಳೆ. ಕೊರಳಿಗೆ ಮತ್ತು ಕಿವಿಗೆ ವರನ ಕೈ ಟಚ್ ಆಗಿದೆಯಂತೆ, ಅದೇ ಕಾರಣಕ್ಕೆ ವಧು ಸಿಟ್ಟಾಗಿದ್ದಾಳೆ.
ಘಟನೆ ಒಟ್ಟಾರೆ ವಿಚಿತ್ರವಾಗಿ ಕಂಡಿದೆ. ತದನಂತರ ಮಾತುಕತೆಯ ಬಳಿಕ ಕಾರ್ಯಕ್ರಮ ಮುಂದುವರಿಯಿತಂತೆ. ಹೀಗೆ ಮುಂದುವರಿದು ಇನ್ನೇನು ಮುಹೂರ್ತದ ಸಮಯ ಕೂಡಿ ಬಂದಾಗ ವರನು ಇನ್ನೇನು ತಾಳಿ ಕಟ್ಟಿಬೇಕು ಎಂದು ಮುಂದಾದಾಗ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳಂತೆ. ಇದರಿಂದ ವರ ದಿಗ್ಬ್ರಮೆಗೊಂಡಿದ್ದು ಸಮಾರಂಭದಲ್ಲಿ ಹೆಣ್ಣು-ಗಂಡಿನ ಕುಟುಂಬಗಳೆರಡು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭವಾದಾಗ ವೇಣೂರು ಠಾಣಾ ಪೊಲೀಸರ ಆಗಮನವಾಗಿದೆ.
ಬಳಿಕ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ವಧು ಗಂಭೀರ ಆರೋಪವನ್ನು ಮಾಡಿದಳಂತೆ. ಅದೇನೆಂದರೆ, ಮದುವೆಯ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ, ಈಗ ಮದುವೆಯಾಗುತ್ತಿರುವ ವರ ಬೇರೆಯವನೇ ಎಂದು ಅಚ್ಚರಿಯ ಮಾತನ್ನು ಹೇಳಿದಳಂತೆ.
ಇದರಿಂದಾಗಿ ಪ್ರಕರಣ ಕೆಲ ತಿರುವುಗಳನ್ನೂ ಪಡೆದುಕೊಂಡಿದೆ. ವಧು ಮದುವೆಯನ್ನು ತಿರಸ್ಕರಿಸಲು ಕಾರಣ ಏನೆನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಮದುವೆ ಆಗುವ ಹುಡುಗನ ಮೇಲೆ ಮನಸ್ಸಿಲ್ಲದ ಹುಡುಗಿ ಹೀಗೆ ಕ್ಯಾತೆ ತೆಗೆದಿದ್ದಾಳೆ ಎನ್ನಲಾಗಿದೆ.