ಬೆಳ್ತಂಗಡಿ: ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ. ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ಆಟೋ ಚಾಲಕ. ಮೊದಲು ಇದೊಂದು ಶಂಕೆ ಎಂದು ತಿಳಿದು ಬಂದಿತ್ತು. ಆದರೆ ಶೋಧ ಕಾರ್ಯ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಪ್ರವೀಣ್ ಪಿಂಟೋ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು ಪತಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳಿದೆ ಎಂದು ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮೃತ ಪ್ರವೀಣ್ ಪಿಂಟೋ ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರವೀಣ್ ಮಂಗಳವಾರ ರಾತ್ರಿ ಮನೆಯಿಂದ ಓಡಿಲ್ನಾಳ ಗ್ರಾಮದ ಅಮರ್ ಜಾಲ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ. ಆತ ಮನೆಗೆ ಬಾರದಿದ್ದಾಗ ಪತ್ನಿ ಕರೆಮಾಡಿದಾಗ ರಾತ್ರಿ 1:39ಕ್ಕೆ ತಾನು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮನೆಗೆ ಹಿಂದಿರುಗಿರಲಿಲ್ಲ ಬಳಿಕ ಬುಧವಾರ ಬೆಳಿಗ್ಗೆ ಪ್ರವೀಣನ ಡ್ರೈವಿಂಗ್ ಲೈಸನ್ಸ್ ಹಾಗೂ ದಾಖಲೆಗಳು ಕೆರೆಯ ಸಮೀಪ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ
ಹೆಂಡತಿಯ ಆರೋಪಗಳೇನು? ದೂರಿನಲ್ಲಿ ಏನಿದೆ.
ಮೆಹಂದಿ ಮನೆಯಲ್ಲಿ ಪ್ರವೀಣ್ ಹಾಗೂ ಪ್ರದೀಪ್ ಶೆಟ್ಟಿ ಎಂಬವರ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದಿರುವ ವಿಚಾರ ಬಳಿಕ ತಿಳಿದು ಬಂದಿದೆ. ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯ ಸಮೀಪ ಕಾರೊಂದು ಬಂದು ಹೋಗಿರುವುದಾಗಿಯೂ, ಮೃತದೇಹದಲ್ಲಿ ಪ್ರವೀಣ್ ಧರಿಸಿದ್ದ ಕೆಂಪು ಟೀ ಶರ್ಟ್ ಇರಲಿಲ್ಲ ಎಂದೂ ಇದರಿಂದಾಗಿ ಪ್ರವೀಣ್ ಅವರ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನವಿದ್ದು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ರೇಷ್ಮಾ ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ:
ಮೆಹಂದಿ ಮನೆಯಲ್ಲಿ ಏನು ಸಂಭವಿಸಿದೆ ಎಂಬ ವಿಚಾರದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರವೀಣ್ ಮೇಲೆ ಹಲ್ಲೆ ನಡೆಸಿದವರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬೆಳಗ್ಗಿನ ಜಾವ ಪ್ರವೀಣ್ ರವರ ಮನೆ ಸಮೀಪ ಬಂದ ಕಾರು ಯಾರದು ಯಾಕಾಗಿ ಬಂದಿದ್ದಾರೆ ಎಂಬುದು ಮತ್ತೊಂದು ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಪೊಲೀಸರು ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಇದೀಗ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನಲ್ಲಿ ನಡೆಸಲಾಗಿದ್ದು ಇದರಿಂದ ಹೆಚ್ಚಿನ ಮಾಹಿತಿಗಳು ಲಭಿಸುವ ನಿರೀಕ್ಷೆಯಿದೆ.