ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ 73ರ ರಸ್ತೆಯ ಮುಂಡಾಜೆ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ಗುರುವಾರ(ಡಿ.15) ಮಧ್ಯಾಹ್ನ ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಅಂಬಡ್ತ್ಯಾರು ಸಮೀಪಿಸುತ್ತಿದಂತೆ ಲಾರಿಯ ಹಿಂಬದಿ ಕಬ್ಬಿಣದ ಟ್ರಾಲಿ ಬಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನಲ್ಲಿದ್ದ ಕ್ಯಾಂಟೀನ್ ಸಮೀಪ ಹೋಗಿ ನಿಂತಿದೆ. ಒಂದೆಡೆ ವಿದ್ಯು ತ್ ಕಂಬ ಹಾಗೂ ಸಮೀಪವೇ ಕ್ಯಾಂಟೀನ್ ಇದ್ದು , ನಿಯಂತ್ರಣ ತಪ್ಪಿದ ಲಾರಿ ಕ್ಯಾಂಟೀನ್ ಮುಂಭಾಗದವರೆಗೂ ಚಲಿಸಿ ಬಳಿಕ ನಿಂತಿದೆ.
ಘಟನೆಯಲ್ಲಿ ಲಾರಿಯ ಟ್ರಾಲಿ ಸಂಪೂರ್ಣ ಭಾಗಿ ಹೋಗಿದ್ದು, ಸ್ಥಳೀಯರು ಮರದ ಕಂಬಗಳನ್ನು ಆಧಾರವಾಗಿ ಇರಿಸಿದ್ದಾರೆ. ‘ಹೊಸ ಲಾರಿ ಆಗಿದ್ದು ಇದು ಕೇವಲ ಐದನೇ ಟ್ರಿಪ್ ಆಗಿದೆ. ಯಾವುದೇ ರೀತಿಯ ಓವರ್ ಲೋಡ್ ಇಲ್ಲದಿದ್ದರೂ ಟ್ರಾಲಿ ಮುರಿದಿದೆ’ ಎಂದು ಚಾಲಕ ತಿಳಿಸಿದ್ದಾನೆ. ಲಾರಿ ಖರೀದಿಸಿ ಕೆಲವೇ ತಿಂಗಳುಗಳಾಗಿದ್ದು, ಘಟನೆಯಿಂದ ಚಾಲಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.