ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಸ್ತಬ್ದ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವ ಬಗ್ಗೆ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜ.19ರಂದು ಪತ್ರಿಕಾಗೋಷ್ಠಿ ನಡೆಯಿತು.
ಈ ಬಗ್ಗೆ ಮಾತನಾಡಿದ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜರಾಮ್ ಕೆ. ಬಿ “ಸಮಾಜ ಸುಧಾರಕ, ಹಿಂದೂ ಧರ್ಮದ ರಕ್ಷಕ ಸರ್ವ ಜನರಿಂದಲೂ ಗೌರವಿಸಲಾಗುವ ಮಹಾನ್ ಮಾನವತಾವಾದಿ, ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆ ಹೊಂದಿದ ಗಣರಾಜ್ಯೋತ್ಸವಕ್ಕೆ ಕೇರಳ ಸರಕಾರ ನಿರ್ಮಾಣ ಮಾಡಿದ್ದ ಸ್ತಬ್ದ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ನಮಗೆ ದಿಗ್ಬ್ರಮೆ ಮತ್ತು ಅತ್ಯಂತ ನೋವುಂಟು ಮಾಡಿದೆ.
ಇದು ಜಾತಿ ಧರ್ಮದ ಮಿತಿಯನ್ನು ಮೀರಿ ಸಮಸ್ತ ನಾರಾಯಣ ಗುರು ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಕೇಂದ್ರ ಸರಕಾರವು ತನ್ನ ಈ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.
ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದ ನಾನಾ ಕಡೆಗಳಲ್ಲಿ ಗುರುದೇವನನ್ನು ದೇವರೆಂದೇ ಪೂಜಿಸುವ ದೊಡ್ಡ ಜನಸಮೂಹವಿದ್ದು, ಸರಕಾರವು ಗುರುದೇವನ ಪ್ರತಿಮೆ ಬದಲಾವಣೆ ಮಾಡಲು ತಿಳಿಸುವ ಮೂಲಕ ಜನಸಮೂಹಕ್ಕೆ ನಿರಾಸೆ ಮತ್ತು ದುಃಖ ಉಂಟುಮಾಡಿದಲ್ಲದೆ, ಆಗೌರವ ತೋರಿಸಿದೆ.
ಕೇರಳ ಸರಕಾರವು ಜಟಾಯುಪಾರ ದ್ವಾರದ ಮಾದರಿಯ ಸ್ತಬ್ದಚಿತ್ರದ ಮುಂಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಮೆ ಇರಿಸಿ ಸಿದ್ಧಪಡಿಸಲಾಗಿತ್ತು. ಆದರೆ, ರಕ್ಷಣಾ ಇಲಾಖೆಯು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಪ್ರದರ್ಶನಕ್ಕೆ ನಿರಾಕರಿಸಿರುವುದು ಸರಿಯಾದ ಕ್ರಮವಲ್ಲ.
ಕೇರಳ ರಾಜ್ಯದಾದ್ಯಂತ ಗುರುದೇವ ಎಂದೇ ಜನಪ್ರಿಯರಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ, ಸಮಾಜದಲ್ಲಿದ್ದ ಅಸಮಾತೆಯನ್ನು ಹೋಗಲಾಡಿಸಲು ತಮ್ಮದೇ ಆದ ವಿಶಿಷ್ಟ ಕ್ರಮಗಳ ಮೂಲಕ ಹೋರಾಟ ನಡೆಸಿ ಸಮಾಜದ ಎಲ್ಲ ಸ್ತರದ ಜನರಿಗೆ ಗೌರವ ತಂದುಕೊಟ್ಟಿದ್ದಾರೆ.
ಅಸಮಾನತೆಯ ನೀತಿಗಳಿಂದ ಹರಿದು ಹಂಚಿ ಹೋಗಬಹುದಾಗಿದ್ದ, ಹಿಂದೂ ಧರ್ಮವನ್ನು ಸಂರಕ್ಷಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂಬುದನ್ನು ಸಾವ್ರ ಮೊದಲಾಗಿ ಮನಗಾಣಬೇಕು.
ವಿದ್ಯೆ ಮತ್ತು ಸಂಘಟನೆಯ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಪುರುಷನ ಕೊಡುಗೆಯನ್ನು ಪ್ರಜಾಪ್ರಭುತ್ವ ಸರಕಾರ ಕಡೆಗಣಿಸಿರುವುದು ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಆದುದರಿಂದ ಕೇಂದ್ರ ಸರಕಾರವು ತನ್ನ ಕ್ರಮವನ್ನು ಮರುಪರಿಶೀಲಿಸಿ, ಗುರುದೇವನ ಪ್ರತಿಮೆ ಇರುವ ಸ್ತಬ್ಧಚಿತ್ರಕ್ಕೆ ಗಣರಾಜೋತ್ಸವಕ್ಕೆ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ.”
ಈ ಸಂದರ್ಭದಲ್ಲಿ ಮುರಳೀಧರ ರೈ ಮಠಂತಬೆಟ್ಟು , ಜಯಪ್ರಕಾಶ್ ಬದಿನಾರು, ರಮಾನಾಥ ವಿಟ್ಲ , ಎಂ.ಎಸ್. ಮಹಮ್ಮದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.