ದೆಹಲಿ: ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸಿಜೆಐ ರಮಣ ಅವರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ವೇಳೆ ನಿರ್ಗಮಿತ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಗಣ್ಯರು ಭಾಗಿಯಾಗಿದ್ದಾರೆ.
ನೂತನ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರ ಭಾಷಣ ಪ್ರಾರಂಭವಾಗಿದ್ದು, ʻಮಹಿಳಾ ಸಬಲೀಕರಣವೇ ನನ್ನ ಮೊದಲ ಆದ್ಯತೆʼ ಎಂದಿದ್ದಾರೆ. ಅಷ್ಟೇ ಅಲ್ಲದೇ, ಭಾರತದ ವಿಕಾಸ ಯಾತ್ರೆಯ ವೇಗ ಹೆಚ್ಚಿಸಬೇಕು. ಸ್ವಾತಂತ್ರ್ಯ ಅಮೃತೋತ್ಸವ ಹೊತ್ತಲ್ಲಿ ಇದು ಹೊಸ ಚರಿತ್ರೆ. ನಾನು ಜನತೆಯ ಆಶೋತ್ತರಗಳನ್ನು ಎತ್ತಿ ಹಿಡಿಯುತ್ತೇನೆ. ಬಡವರ ಕನಸು ನನಸು ಮಾಡಲು ಬದ್ಧವಾಗಿರುವೆ ಎಂದಿದ್ದಾರೆ.
ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ ಮುರ್ಮು.