ತಿರುವನಂತಪುರಂ: ಇಲ್ಲಿನ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ನಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಮಾಡೆಲ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿದ ಕಾರು ಚಕ್ಕರ ಪರಂಬುವಿನಲ್ಲಿ ಹಾಲಿಡೇ ಇನ್ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಮೃತರು ಮಿಸ್ ಕೇರಳ 2019 ಪ್ರಶಸ್ತಿ ವಿಜೇತೆ ಆನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಡೆಲಿಂಗ್ ಫೋಟೋ ಸೆಷನ್ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು ಮತ್ತು ತ್ರಿಶೂರ್ಗೆ ತೆರಳುತ್ತಿದ್ದಾಗ ಚಕ್ಕರಪರಂಬು ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಮಾಜಿ ಮಿಸ್ ಕೇರಳ ಅನ್ಸಿ ಕಬೀರ್ ವಾಹನ ಅಪಘಾತದಲ್ಲಿ ಮೃತಪಟ್ಟ ಮಾಹಿತಿ ತಿಳಿದ ಅವರ ಅಮ್ಮ ರಸೀನ (48) ಕುಸಿದು ಬಿದ್ದಿದ್ದಾರೆ. ಇವರನ್ನು ತಿರುವನಂತಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಕಬೀರ್ ವಿದೇಶದಲ್ಲಿದ್ದಾರೆ . ಆಟಿಂಗಲ್ ಆಲಂಕೋಟ್, ಪಾಲಕೋಣಂ ಅನ್ಸಿ ಕೊಟ್ಟೇಜಿನಲ್ಲಿ ಆನ್ಸಿಯ ಅಮ್ಮ ವಾಸಿಸುತ್ತಿದ್ದಾರೆ. ಆನ್ಸಿಯ ಪೋಸ್ಟ್ಮಾರ್ಟಮ್ ಕ್ರಮಕ್ಕಾಗಿ ಸಂಬಂಧಿಗಳು ಕೊಚ್ಚಿಗೆ ಮರಳಿದ್ದಾರೆ. ಕಬೀರ್-ರಸೀನ ದಂಪತಿಗಳ ಏಕೈಕ ಪುತ್ರಿ ಆಗಿದ್ದಾರೆ ಆನ್ಸಿ.
ಸಾಯುವ ಕೊನೆಯ ಪಯಣಕ್ಕೂ ಮುನ್ನ “ಇದು ಹೋಗಲು ಸಮಯ” ಎಂದು ಆನ್ಸಿ ಕಬೀರ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಈ ಮೂಲಕ ಮಾಜಿ ಸುಂದರಿ ಕೇರಳದ ಆನ್ಸಿ ಕಬೀರ್ ಅವರ ಮಾತು ಕೇಳಿ ಅಭಿಮಾನಿಗಳು ಮತ್ತು ಸ್ನೇಹಿತರು ಶಾಕ್ ಆಗಿದ್ದಾರೆ.
ಅನ್ನಿಯ ಸಾವಿನ ದುಃಖವನ್ನು ಹಂಚಿಕೊಂಡ ಅನೇಕರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಇದು ನಂಬಲಸಾಧ್ಯ ಎಂದು ಬರೆದಿದ್ದಾರೆ. ಕೆಲವು ಜನರು ಆನ್ಸಿ ಇದನ್ನು ಮೊದಲೇ ನಿರೀಕ್ಷಿಸಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್ ಗೃಹಲಕ್ಷ್ಮಿ ಫೇಸ್ ಆಫ್ ಕೇರಳ 2018 ರ ಅಂತಿಮ ಸ್ಪರ್ಧಿಯೂ ಆಗಿದ್ದರು. ಅಂಜನಾ ಶಾಜನ್, ಆನ್ಸಿಯ ಸ್ನೇಹಿತೆ ಮತ್ತು 2019 ರ ಮಿಸ್ ಕೇರಳ ರನ್ನರ್-ಅಪ್ ತ್ರಿಶೂರ್ ಮೂಲದವರು.