Wednesday, April 24, 2024
spot_imgspot_img
spot_imgspot_img

ಮಂಗಳೂರು: ಅತ್ತೆಯ ತಾಳಿಯ ಮೇಲೆ ಅಳಿಯನ ಕಣ್ಣು; ಮನೆಗೆ ನುಗ್ಗಿ ಚಿನ್ನ ಕಳವುಗೈದ ಅಳಿಯ ಅಂದರ್

- Advertisement -G L Acharya panikkar
- Advertisement -

ಮಂಗಳೂರು‌: ನಗರದ ಹೊರವಲಯದ ಕುಳಾಯಿ ಗ್ರಾಮದ ಸಂಘ ಮಿತ್ತೊಟ್ಟು ಕಾಲೊನಿ ಬಳಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಮನೆಯೊಡತಿ ಸುಮತಿ ಆಚಾರ್ಯ(40) ಅವರನ್ನು ಏಕಾಏಕಿ ದೂಡಿ ಬಾಯಿಗೆ ಬಟ್ಟೆ ಕಟ್ಟಿ ಬಳಿಕ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಲೂಟಿ ಮಾಡಿದ ಪ್ರಕರಣದಲ್ಲಿ ಮನೆಯೊಡತಿಯ ಅಳಿಯನೇ ಪಾಲ್ಗೊಂಡಿರುವುದು ಮನೆಯವರಿಗೆ ಶಾಕ್‌ ಆಗಿದೆ.

ಕರಿಮಣಿ ಎಳೆಯುವ ಸಂದರ್ಭ ಮಹಿಳೆ ಕಳ್ಳನೊಬ್ಬನ ಕೈಗೆ ಕಚ್ಚಿದ ಕಾರಣ ಚಿನ್ನದ ಕರಿಮಣಿಯ ಅರ್ಧ ಭಾಗ ಮಾತ್ರ ಕಳ್ಳರ ಪಾಲಾಗಿತ್ತು. ಈ ವೇಳೆ ಸ್ಥಳೀಯ ಸಿಸಿ ಟಿವಿಯಲ್ಲಿ ಕಳ್ಳನು ದರೋಡೆ ನಡೆಸಿ ಪರಾರಿಯಾಗುವ ದೃಶ್ಯ ದಾಖಲಾಗಿದ್ದು ಈ ಮೂಲಕ ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ಕಳ್ಳತನ ನಡೆಸಿದ ಆರೋಪಿಗಳಾದ ಶಿವಮೊಗ್ಗ ಮೂಲದ ಮಣಿ(35), ವಿನಯ್‌ ಕುಮಾರ್‌( 32) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಪರ್ಯಾಸವೆಂದರೆ ಆರೋಪಿ ವಿನಯ್‌ ಕುಮಾರ್‌ ಕಳ್ಳತನ ನಡೆಸಿದ ಮನೆಯೊಡತಿ ಸುಮತಿ ಆಚಾರ್ಯರ ಅಳಿಯನಾಗಿದ್ದಾನೆ. ಮನೆ ಅಳಿಯನೇ ಇಂತಹ ಕೃತ್ಯಕ್ಕೆ ಇಳಿದಿರುವುದನ್ನು ಕಂಡು ಮನೆಯವರಿಗೆ ಶಾಕ್‌ ಆಗಿದೆ.

ಕಳವುಗೈದ ಸುಮಾರು 32 ಗ್ರಾಂ ತೂಕದ 60,000 ಸಾವಿರ ಮೌಲ್ಯದ ಕರಿಮಣಿಯನ್ನು ವಿನಯ್‌ ಕುಮಾರ್‌ ತನ್ನ ಪತ್ನಿಯ ಸಹಕಾರದಿಂದ ಫೈನಾನ್ಸ್‌ನಲ್ಲಿ ಅಡವಿರಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುರತ್ಕಲ್‌ ಪೋಲೀಸರು ತನಿಖೆ ದಾಖಲಿಸಿ ಚಿನ್ನಾಭರಣವನ್ನು ವಶಪಡಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!