ಮಂಗಳೂರು: ಕೊರೋನಾ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್ ಸಮೀಪ ಚಿತ್ರಾಪುರದ ಬಹುಮಹಡಿ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರನ್ನು ರಮೇಶ್ ಸುವರ್ಣ ಹಾಗೂ ಅವರ ಪತ್ನಿ ಗುಣ ಸುವರ್ಣ ಎನ್ನಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಪತ್ನಿ ಕೊರಳಿಗೆ ನೇಣು ಹಾಕಿಕೊಂಡು ಮೃತರಾದರೆ ಇಷ್ಟು ವಿಚಾರಗಳನ್ನು ಆಯುಕ್ತರಿಗೆ ವಾಟ್ಸ್ಯಾಪ್ನಲ್ಲಿ ವಾಯ್ಸ್ ಕ್ಲಿಪ್ ಕಳುಹಿಸಿದ ಬಳಿಕ ಪತಿಯೂ ಮೃತರಾಗಿದ್ದಾರೆ.
ರಮೇಶ್ ಸುವರ್ಣ ಅವರ ಪತ್ನಿ ಗುಣ ಸುವರ್ಣ ಅವರು ಎರಡು ಬಾರಿ ಸಿಸೇರಿಯನ್ಗೆ ಒಳಗಾದರೂ ಅವರ ಮಕ್ಕಳು ಉಳಿದಿರಲಿಲ್ಲ. ಅಲ್ಲದೆ ಅವರಿಗೆ ಶುಗರ್ ಮತ್ತಿತರ ಕಾಯಿಲೆಗಳಿದ್ದು ಇತ್ತೀಚೆಗಷ್ಟೇ ಕರೊನಾ ಲಕ್ಷಣಗಳು ಕಾಣಿಸಿದ್ದವು. ಅವರ ಪತಿ ರಮೇಶ್ ಸುವರ್ಣ ಅವರಿಗೂ ಕೆಲ ದಿನಗಳಿಂದ ಕರೊನಾ ಲಕ್ಷಣಗಳಿದ್ದವು.
ವಾಯ್ಸ್ ಕ್ಲಿಪ್ಪಿಂಗ್ ಮೂಲಕ ವಿವರವಾಗಿ ತಮ್ಮ ಪರಿಸ್ಥಿತಿಯನ್ನು ರಮೇಶ್ ಸುವರ್ಣ ವಿವರಿಸಿ ಈಗಷ್ಟೇ ಪತ್ನಿ ನೇಣು ಹಾಕಿಕೊಂಡಿದ್ದಾರೆ, ನಾನಿನ್ನು ಬದುಕಿರುವುದಿಲ್ಲ. ನನ್ನ ಮನೆಯವರಿಗೆ ಶವ ಹಸ್ತಾಂತರಿಸುವುದು ಬೇಡ, ಅವರೆಲ್ಲರಿಗೂ ಕೋವಿಡ್ ಆಗಿದೆ, ತೊಂದರೆ ಕೊಡುವುದು ಬೇಡ, ಹಿಂದು ಸಂಘಟನೆಯವರು ನಮ್ಮ ಅಂತ್ಯಕ್ರಿಯೆಯನ್ನು ನೆರವೇರಿಸಬೇಕು ಎಂದು ವಾಯ್ಸ್ ನೋಟ್ ಮೂಲಕ ಹಾಗೂ ಅವರ ಪತ್ನಿ ವಿವರವಾದ ಡೆತ್ನೋಟ್ ಕೂಡಾ ಬರೆದಿದ್ದಾರೆ.
ತಕ್ಷಣ ಆಯುಕ್ತರು ಈ ಕರೆ ಎಲ್ಲಿಂದ ಬಂದಿದೆ ಎನ್ನುವುದನ್ನು ಪರಿಶೀಲಿಸಿ ಅವರ ಮನೆಗೆ ಪೊಲೀಸರು ಹೋಗುವಾಗ ಇಬ್ಬರೂ ನೇಣು ಬಿಗಿದು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.