ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರನ್ನು ಸುಮಾರು ಎರಡೂವರೆ ತಿಂಗಳು ಮಂಗಳೂರಿನಲ್ಲಿ ಒತ್ತೆಯಾಳಾಗಿರಿಸಿ 80 ಲಕ್ಷಕ್ಕೂ ಅಧಿಕ ಮೊತ್ತ ಸುಲಿಗೆ ಮಾಡಿದ್ದಲ್ಲದೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಜತೆ ಸಂಪರ್ಕವಿರುವುದಾಗಿ ಹೇಳಿ ವಂಚಿಸಿದ್ದ ಫಳ್ನೀರ್ ನಿವಾಸಿ ದಿವ್ಯ ದರ್ಶನ(33) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ರವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದುಬೈಯಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು ಆರೋಪಿ ದಿವ್ಯದರ್ಶನ್ ‘ನಿಮಗೆ ಜೀವ ಬೆದರಿಕೆ ಇದೆ’ ಎಂದು ಹೇಳಿ ತನ್ನ ವಸತಿ ಗೃಹದಲ್ಲಿ ಒತ್ತೆಯಾಳಾಗಿಸಿದ್ದ.
ಬಳಿಕ ತನ್ನದೇ ಸಹಚರರಿಂದ ಹನೀಫ್ಗೆ ಜೀವ ಬೆದರಿಕೆಯೊಡ್ಡಿ ಅವರಿಂದ ಮೊದಲಿಗೆ 30 ಲಕ್ಷ ರೂ. ಹಾಗೂ ಮತ್ತೊಮ್ಮೆ 55 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟು ಶಸ್ತ್ರಾಸ್ತ್ರ ತೋರಿಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ದೂರು ದಾಖಲಾಗಿದೆ.ಹನೀಫ್ ಅವರ ಸಹೋದರನ ವ್ಯವಹಾರಕ್ಕೆ ಸಂಬಂಧಿಸಿ ನೆರವು ನೀಡುವ ನೆಪದಲ್ಲಿಅವರ ಜಾಗ್ವಾರ್ ಕಾರನ್ನು ಆರೋಪಿ ದಿವ್ಯದರ್ಶನ್ ತನ್ನ ಬಳಿ ಇರಿಸಿಕೊಂಡಿದ್ದ.
ಇದೇ ಅವಧಿಯಲ್ಲಿ ಹನೀಫ್ ವಿಟ್ಲದಲ್ಲಿ ಬಾಕ್ಸೈಟ್ ಮೈನಿಂಗ್ ಆರಂಭಿಸಲು ಪರವಾನಗಿಗೆ ಮುಂದಾದಾಗ ದಿವ್ಯದರ್ಶನ್ ‘ನನಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಕೀಲರ ಪರಿಚಯವಿದೆ’ ಎಂದು ಹೇಳಿ ನಂಬಿಸಿದ್ದ. ಪೊಲೀಸ್ ಅಧಿಕಾರಿಗಳ ಜತೆ ಪರಿಚಯವಿರುವಂತೆ ನಟಿಸಿದ್ದ.
ಜತೆಗೆ ಹನೀಫ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಶರೀಫ್ ಎಂಬವರ ಜತೆಗೂ ಸಂಪರ್ಕ ಬೆಳೆಸಿ ಅವರಿಬ್ಬರ ಮಧ್ಯೆ ಒಡಕು ಮೂಡಿಸಿದ್ದ. ಡೀಲ್ ವ್ಯವಹಾರಕ್ಕೆ ದುಬೈಗೂ ಹೋಗಿ ಬಂದಿದ್ದ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ದಿವ್ಯ ದರ್ಶನ್ನಿಂದ ಹಲವರಿಗೆ ಮೋಸವಾಗಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಆದರೆ ಅಧಿಕೃತವಾಗಿ ಯಾರೂ ದೂರು ನೀಡಿರಲಿಲ್ಲ. ಇದು ಮೊದಲ ಪ್ರಕರಣವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಈತನಿಗೆ ಸಹಕಾರ ನೀಡಿದ 7 ರಿಂದ 8 ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ತಿಳಿಸಿದರು. ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಂ ಶಂಕರ್ ಉಪಸ್ಥಿತರಿದ್ದರು.