ಬೆಳ್ತಂಗಡಿ: ದೇವಸ್ಥಾನದ ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿಯ ಸವಣಾಲು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರಸಿ ಮೂಲದ ವಿಜಯ್ ಹೆಗಡೆ (33) ಎಂದು ಗುರುತಿಸಲಾಗಿದೆ.
ವಿಜಯ್ ಹೆಗಡೆ ಅವರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಿಗಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸುಮಾರು 10 ವರ್ಷಗಳಿಂದ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಮುಂಜಾನೆ ಭಕ್ತರು ಆಗಮಿಸುವ ವೇಳೆ ವಿಜಯ್ ಬರದಿರುವುದನ್ನು ಕಂಡ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಅವರು ತಂಗುತ್ತಿದ್ದ ವಸತಿಗೃಹಕ್ಕೆ ವಿಚಾರಿಸಲು ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ವಿಜಯ್ ಅವರ ಬಾಣಂತಿ ಪತ್ನಿಯು ಅವರ ತಾಯಿ ಮನೆಯಲ್ಲಿದ್ದರು. ಪತ್ನಿ ಮನೆಯವರು ಬಂದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.