ಮಂಗಳೂರು: ಏಕಾಏಕಿ ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿಯೋರ್ವ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯೊಂದು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಗುರುಪುರ ಸೇತುವೆ ಹೊಳೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸಿ ಚಿರಪರಿಚಿತನಾಗಿದ್ದ ಗುರುಪುರ-ಕೈಕಂಬ ಬಳಿಯ ಕಾಜಿಲ ಎಂಬಲ್ಲಿನ ನಿವಾಸಿ ಪವನ್ ಎಂದು ಗುರುತಿಸಲಾಗಿದೆ.
ಈತ ನಿನ್ನೆ ಏಕಾಏಕಿ ಮನೆಯಿಂದ ಹೊರಟು ಹೋಗಿದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಆಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇತ್ತ ಗಾಬರಿಗೊಂಡ ಮನೆಮಂದಿ ಹಾಗೂ ಹಿತೈಷಿಗಳು ಈತನ ಸುಳಿವು ಕಾಣಲು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವಿವರಗಳನ್ನು ಹರಿಯಬಿಟ್ಟಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಮಧ್ಯಾಹ್ನ ಹೊತ್ತಿಗೆ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಹಾಗೂ ಪೊಲೀಸರ ಸಹಾಯದಿಂದ ಶವ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವಿನ ಸುತ್ತ ಕೆಲವೊಂದು ಅನುಮಾನಗಳು ವ್ಯಕ್ತವಾಗಿದ್ದು, ಪ್ರೀತಿಯ ವಿಚಾರವಾಗಿ ನೊಂದುಕೊಂಡು ಆತ್ಮಹತ್ಯೆ ನಡೆಸಿದ್ದಾನೆ ಎನ್ನುವ ಮಾತುಗಳು ಕೇಳಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ .