ಮಂಗಳೂರು: ಮಂಗಳೂರಿನಲ್ಲಿ ಮರಳು ಮಾಫಿಯಾ ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ, ಇಲ್ಲಿನ ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ ಅನ್ನುವುದಕ್ಕಿದು ಸಣ್ಣ ನಿದರ್ಶನ. ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ರಂಜಿತ್ ಬಂಡಾರು ವರ್ಗಾವಣೆಗೊಂಡ ಜಾಗಕ್ಕೆ ಗುಲ್ಬರ್ಗ ನಗರ ಎಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ದೀಪನ್ ಎಂ.ಎನ್. ಅವರನ್ನು ನಿಯೋಜನೆ ಮಾಡಲಾಗಿತ್ತು. ಜನವರಿ 1ರಂದು ಕರ್ತವ್ಯಕ್ಕೆ ಹಾಜರಾಗಿದ್ದ ದೀಪನ್, ಎರಡೇ ದಿನದಲ್ಲಿ ಎತ್ತಂಗಡಿ ಆಗಿದ್ದಾರೆ.
ದೀಪನ್ ಮಂಗಳೂರು ನಗರ ದಕ್ಷಿಣ ಎಸಿಪಿ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗುವ ಮೊದಲೇ ಇಲ್ಲಿನ ಮಾಫಿಯಾಗಳ ಬಗ್ಗೆ ತಿಳಿದುಕೊಂಡಿದ್ದರು. ಗುಲ್ಬರ್ಗದಲ್ಲಿ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ದೀಪನ್, ದಕ್ಷಿಣ ಉಪವಿಭಾಗಕ್ಕೆ ಬರುವ ಉಳ್ಳಾಲ, ಕೊಣಾಜೆ, ಕಂಕನಾಡಿ ಗ್ರಾಮಾಂತರ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಮರಳು ಮಾಫಿಯಾ, ಬಾಕ್ಸೈಟ್ ಮಣ್ಣು ಮಾಫಿಯಾ ಇನ್ನಿತರ ಅಕ್ರಮ ದಂಧೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ನಾಲ್ಕು ಠಾಣೆಗಳಿಗೆ ಮೇಲಧಿಕಾರಿಯಾಗಿ ನಿಯೋಜನೆಗೊಂಡಿದ್ದ ಎಸಿಪಿ ದೀಪನ್, ಕರ್ತವ್ಯಕ್ಕೆ ಹಾಜರಾದ ದಿನವೇ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳನ್ನು ಕರೆದು ತಮ್ಮ ಕಚೇರಿಯಲ್ಲಿ ಮೀಟಿಂಗ್ ಮಾಡಿದ್ದರು.
ನಿಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಏನೆಲ್ಲಾ ಮಾಫಿಯಾಗಳು ನಡೆಯುತ್ತವೆ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ನನ್ನಲ್ಲಿವೆ. ಉಳ್ಳಾಲದ ಸಮುದ್ರ ದಂಡೆಯಿಂದ ಹಗಲು- ರಾತ್ರಿ ಮರಳನ್ನು ಎತ್ತಿ ಕೇರಳಕ್ಕೆ ಸಾಗಿಸುವುದು, ಅದಕ್ಕೆ ಕೊಣಾಜೆ, ಉಳ್ಳಾಲ ಪೊಲೀಸರು ಸಾಥ್ ಕೊಡುವುದು, ತಲಪಾಡಿ ಗಡಿಯಲ್ಲಿ ಕೇರಳಕ್ಕೆ ಹೋಗುವುದು ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಉಳ್ಳಾಲದ ಎಸ್ಐ ಪ್ರದೀಪ್ ಅವರನ್ನು ಹೆಸರೆತ್ತಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರಂತೆ. ಏನೇ ಅಕ್ರಮ, ಮಾಫಿಯಾ ಇದ್ದರೂ ನನ್ನ ಉಸ್ತುವಾರಿ ಇದ್ದ ಮೇಲೆ ನಡೆಯಲ್ಲ. ಮರಳು ಹೇಗೆ ಹೋಗುತ್ತೆ ನೋಡ್ತೀನಿ.. ಕೂಡಲೇ ಏನೇನು ಪೆಂಡಿಂಗ್ ಕೇಸ್ ಗಳಿವೆ, ಎಲ್ಲವನ್ನೂ ಚುಕ್ತಾ ಮಾಡಿ ಎರಡು ದಿನದಲ್ಲಿ ವರದಿ ನೀಡಬೇಕು ಎಂದು ವಾರ್ನ್ ಮಾಡಿದ್ದರು.
ಮೀಟಿಂಗ್ ಮುಗಿಸಿದ ದಿನವೇ ಐಪಿಎಸ್ ಅಧಿಕಾರಿ ದೀಪನ್ ಗೆ ಮೇಲಿನಿಂದ ಸೂಚನೆ ಬಂದಿತ್ತು. ಆದರೆ ಮೇಲಧಿಕಾರಿಗಳ ವಾರ್ನ್ ಬಗ್ಗೆ ನಿರ್ಲಕ್ಷ್ಯ ತೋರಿದ ದೀಪನ್ ಅವರನ್ನು ಎರಡೇ ದಿನದಲ್ಲಿ ಮಂಗಳೂರಿನಿಂದ ಮತ್ತೆ ಗುಲ್ಬರ್ಗಕ್ಕೆ ಎತ್ತಂಗಡಿ ಮಾಡಲಾಗಿದೆ. ಜ.5ರಂದು ಬಂದಿರುವ ಆದೇಶದಲ್ಲಿ ಈ ಹಿಂದೆ ಇದ್ದ ಗುಲ್ಬರ್ಗ ನಗರ ಎಎಸ್ಪಿ ಹುದ್ದೆಯಲ್ಲಿ ಮುಂದುವರಿಯಲು ಸೂಚನೆ ನೀಡಲಾಗಿದೆ. ತನ್ನ ಕೈಕೆಳಗಿನ ಇನ್ ಸ್ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಗಳಿಗೆ ವಾರ್ನ್ ಮಾಡಿದರೆ, ಇಲ್ಲಿನ ಅಧಿಕಾರಿಗಳು ಮಾಫಿಯಾಗಳ ಕಿವಿಗೆ ತಲುಪಿಸಿ ಮೇಲಧಿಕಾರಿಯಾಗಿ ಬಂದ ಒಬ್ಬ ಐಪಿಎಸ್ ಅಧಿಕಾರಿಯನ್ನು ಬಂದ ಎರಡೇ ದಿವಸದಲ್ಲಿ ವರ್ಗ ಮಾಡಿಸುತ್ತಾರೆ ಅಂದರೆ ಇಲ್ಲಿನವರ ಕರಾಮತ್ತು ಹೇಗಿದೆ ನೋಡಿ.
ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ ಠಾಣೆಯ ಭಾಗದಲ್ಲಿ ಬಿಜೆಪಿ- ಕಾಂಗ್ರೆಸ್ ಅನ್ನುವ ಭೇದ ಇಲ್ಲದೆ ಎಲ್ಲರೂ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಬಿಜೆಪಿಯ ಪುಢಾರಿಗಳೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಕೊಣಾಜೆಯಲ್ಲಿ ಮಣ್ಣನ್ನು ಎತ್ತಿ ತಮಿಳುನಾಡಿಗೆ ಅಕ್ರಮವಾಗಿ ಒಯ್ಯುವ ಮಾಫಿಯಾ ಸಕ್ರಿಯವಾಗಿದೆ. ಉಳ್ಳಾಲದಲ್ಲಿ ಎಂಎಲ್ಸಿಯೊಬ್ಬರಿಗೆ ಸೇರಿದ ಯಾರ್ಡ್ ನಿಂದಲೂ ಮರಳು ಹೋಗುತ್ತಿದ್ದುದು ಇತ್ತೀಚೆಗೆ ಪತ್ತೆಯಾಗಿತ್ತು. ಇದೆಲ್ಲದರ ಬಗ್ಗೆ ತಿಳಿದುಕೊಂಡು ಒಬ್ಬ ಐಪಿಎಸ್ ಅಧಿಕಾರಿ ಬರುತ್ತಾನೆ ಅಂದರೆ, ತಕ್ಕಮಟ್ಟಿಗೆ ಸಾಚಾತನ ಉಳಿಸಿಕೊಂಡಿರುವ ಅಧಿಕಾರಿ ಎನ್ನಬೇಕು. ಆದರೆ, ನಮ್ಮ ವ್ಯವಸ್ಥೆ ಹೇಗಿದೆ ಅಂದರೆ ಈ ಮಾಫಿಯಾಗಳ ಜೊತೆಗೆ ಶಾಮೀಲಾಗಿ ಏಗುತ್ತಾ ಹೋದರೆ ಮಾತ್ರ ಉಳಿಯಬಹುದು. ಪ್ರಶ್ನೆ ಮಾಡಲು ಹೋಗುವ ವ್ಯಕ್ತಿಯನ್ನು ಒಂದೇ ದಿನದಲ್ಲಿ ಎತ್ತಂಗಡಿ ಮಾಡಿಸುವಷ್ಟು ಇಲ್ಲಿನ ಮಾಫಿಯಾಗಳು ಪ್ರಬಲವಾಗಿವೆ ಅನ್ನೋದು ಈ ಪ್ರಕರಣದಿಂದ ವೇದ್ಯವಾಗುತ್ತದೆ.
ಅಂದಹಾಗೆ, ದೀಪನ್ ಅವರನ್ನು ಎರಡು ದಿನಗಳಲ್ಲಿ ಎತ್ತಂಗಡಿ ಮಾಡಿದ ಬಳಿಕ ಖಾಲಿಯಾದ ಎಸಿಪಿ ಹುದ್ದೆಗೆ ಡಿಸಿಆರ್ ಬಿಯಲ್ಲಿದ್ದ ದಿನಕರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಡಿವೈಎಸ್ಪಿ ದರ್ಜೆಯ ದಿನಕರ ಶೆಟ್ಟಿ ಹುದ್ದೆಗಾಗಿ ಕಾಯುತ್ತಿದ್ದರು. ದಕ್ಷಿಣ ಎಸಿಪಿ ಹುದ್ದೆಯ ಮೇಲೆ ಕಣ್ಣನ್ನೂ ನೆಟ್ಟಿದ್ದರು. ಇದೀಗ ದೀಪನ್ ಐಪಿಎಸ್ ಎತ್ತಂಗಡಿಯಾಗಿದ್ದು ದಿನಕರ ಶೆಟ್ಟಿಗೆ ಹೊಸ ಹುದ್ದೆಯನ್ನು ತೋರಿಸಿದಂತಾಗಿದೆ.