


ಮಂಗಳೂರಿನ ಕಂಕನಾಡಿಯ ಜ್ಯುವೆಲ್ಲರಿ ಶಾಪ್ ನಲ್ಲಿ ಮುಸ್ಲಿಂ ಯುವಕ, ಹಿಂದೂ ಯುವತಿಯ ಜೋಡಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಉಳ್ಳಾಲದ ಲುಕ್ಮಾನ್ ಎಂಬ ಮುಸ್ಲಿಂ ಯುವಕನ ಜೊತೆ ಶೃಂಗೇರಿ ಕೊಪ್ಪದ ಯುವತಿ ಚಿನ್ನಾಭರಣ ಮಳಿಗೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಕಾರ್ಯಕರ್ತರು ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಮಳಿಗೆಗೆ ಅಕ್ರಮವಾಗಿ ಪ್ರವೇಶಿಸಿದ ಕಾರ್ಯಕರ್ತರ ವಿರುದ್ಧ ಚಿನ್ನಾಭರಣ ಮಳಿಗೆಯವರು ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಯುವಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾನೆ. ಹಾಗೂ ಯುವಕನ ವಿರುದ್ಧ ಯುವತಿಯ ತಾಯಿ ಬೆದರಿಕೆ, ದೌರ್ಜನ್ಯ ದೂರು ನೀಡಿದ್ದಾರೆ.ಅದರಂತೆ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಯುವಕ ಮತ್ತು ಯುವತಿಯನ್ನು ವಿಚಾರಣೆಗೊಳಪಡಿಸಲಾಗಿದೆ. ರಾಜ್ಯಪಾಲರ ಕಾರ್ಯಕ್ರಮದಲ್ಲಿ ಬಂದೋಬಸ್ತ್ ನಲ್ಲಿದ್ದೆ, ಪ್ರಕರಣದ ಮಾಹಿತಿ ಬಂದ ಕೂಡಲೇ ತನಿಖೆಗೆ ಸೂಚಿಸಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.