ಮಂಗಳೂರು: ತಲ್ವಾರ್ ಹಿಡಿದು ಪ್ರೀತಿ ಪಡೆಯಲು ಮುಂದಾದ ಮಂಗಳೂರಿನ ಯುವಕನೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಟ್ವಾಳದ ಬಾರೆಕ್ಕಾಡು ನಿವಾಸಿ ಹೇಮಂತ್ ಶಕ್ತಿನಗರದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಇದು ಏಕಮುಖ ಪ್ರೀತಿಯಾಗಿತ್ತು. ರೌಡಿಸಂ ಮಾಡುತ್ತಾ, ಹೇಮಂತ್ ಹಲವು ಬಾರಿ ಯುವತಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದ. ಆದರೆ ಯುವತಿ ಮಾತ್ರ ಖಡಕ್ ಆಗಿಯೇ ಉತ್ತರಿಸಿ ನಿರಾಕರಿಸಿದ್ದಳು.
ಆದರೆ ಮತ್ತೆ ಮತ್ತೆ ಹೇಮಂತ್ ಕಾಡಿದ್ದರಿಂದ ಯುವತಿ ತನ್ನ ಅಣ್ಣಂದಿರಿಗೆ ಈ ಬಗ್ಗೆ ಹೇಳಿದ್ದಳು. ಹೇಮಂತ್ಗೆ ಕರೆ ಮಾಡಿದ ಯುವತಿಯ ಅಣ್ಣಂದಿರು ತಂಗಿ ಸಹವಾಸಕ್ಕೆ ಬಂದರೆ ಜಾಗೃತೆ ಅಂತಾ ಎಚ್ಚರಿಕೆ ನೀಡಿದ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಬೈದಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಹೇಮಂತ್ ಯುವತಿಯ ಮನೆಗೆ ನುಗ್ಗಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸಹಚರರನ್ನೂ ರೆಡಿ ಮಾಡಿಕೊಂಡಿದ್ದ.
ಮೇ 30ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿದ ಹೇಮಂತ್ ಸಹಿತ ಏಳೆಂಟು ಪುಡಿ ರೌಡಿಗಳ ತಂಡ ಯುವತಿಯ ಅಣ್ಣಂದಿರ ಬಗ್ಗೆ ವಿಚಾರಿಸಿದೆ. ಅವರು ಮನೆಯಲ್ಲಿಲ್ಲ ಅಂತಾ ಹೇಳಿದ್ದೆ ತಡ ಇಡೀ ಮನೆಯನ್ನು ಪುಡಿಗೈಯಲು ಆರಂಭಿಸಿದೆ.
ಮನೆಯಲ್ಲಿದ್ದ ವಯಸ್ಸಾದವರನ್ನು ಬಿಡದೆ ಎಲ್ಲರಿಗೂ ಥಳಿಸಿ ಹೋಗಿದೆ. ಈ ಬಗ್ಗೆ ಯುವತಿ ಮನೆಯವರು ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸದ್ಯ ಆರೋಪಿಗಳ ಪೈಕಿ 6 ಜನರನ್ನು ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ. ಇನ್ನು ಬಂಧಿತರೆಲ್ಲರೂ ಕ್ರೈಂ ಹಿಸ್ಟರಿ ಉಳ್ಳವರು ಎಂದು ತಿಳಿದುಬಂದಿದೆ.