ಮಂಗಳೂರು: ದಸರಾ ಪ್ರಯುಕ್ತ ಮಂಗಳೂರು ಸೇರಿದಂತೆ ಹಲವು ಭಾಗಗಳ ಒಂಭತ್ತು ನವದುರ್ಗೆಯರ ಕ್ಷೇತ್ರಕ್ಕೆ ದಸರಾ ದರ್ಶನ ಪ್ಯಾಕೇಜ್ಗೆ ಜನರ ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಮತ್ತೊಂದು ಪ್ಯಾಕೇಜ್ ಘೋಷಿಸಿದೆ.
ಮಂಗಳೂರಿನಿಂದ ಉಡುಪಿಯ ಹಲವು ದುರ್ಗೆಯರ ಆಲಯ ದಸರಾ ದರ್ಶನಕ್ಕೆ ಕೆಎಸ್ಆರ್ಟಿಸಿ ಬಸ್ ಅನ್ನು ಬಿಡುಗಡೆ ಮಾಡಿದೆ. ಕೇವಲ 450 ರೂಪಾಯಿಯಲ್ಲಿ ಮಂಗಳೂರಿನಿಂದ ಉಡುಪಿಗೆ ಕರೆದುಕೊಂಡು ಹೋಗಲಾಗುತ್ತದೆ. ಉಡುಪಿಯ ನಾಲ್ಕು ಪ್ರಖ್ಯಾತ ದೇವಸ್ಥಾನಗಳ ದರ್ಶನವನ್ನು ಕೆಎಸ್ಆರ್ಟಿಸಿ ಮಾಡಿಸಲಿದೆ.
ಅಕ್ಟೋಬರ್ 1ರಿಂದ 4ರ ವರೆಗೆ ದಸರಾ ದರ್ಶನ ಬಸ್ ಸಂಚಾರ ಮಾಡಲಿದೆ. ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಬಸ್ ಉಡುಪಿಗೆ ಹೊರಡಲಿದೆ. ಉಡುಪಿ-ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಈ ಬಸ್ ತೆರಳಲಿದೆ. ಉಟೋಪಚಾರವನ್ನು ಹೊರತುಪಡಿಸಿ ಟಿಕೆಟ್ ದರ ವಯಸ್ಕರಿಗೆ 450 ರೂಪಾಯಿ, ಆರು ವರ್ಷದಿಂದ ಹನ್ನೆರಡು ವರ್ಷದ ಒಳಗಿನ ಮಕ್ಕಳಿಗೆ 400 ರೂಪಾಯಿ ಟಿಕೆಟ್ ದರ ಮಾಡಲಾಗಿದೆ.
ಬೆಳಗ್ಗೆ ಎಂಟು ಗಂಟೆಗೆ ಮಂಗಳೂರಿನಿಂದ ಬಸ್ ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಿದೆ. ಬೆಳಗ್ಗೆ 11:30ಕ್ಕೆ ಬಿಟ್ಟು, 12:30ಕ್ಕೆ ಮಾರಣಕಟ್ಟೆ ದೇವಸ್ಥಾನದಲ್ಲಿ ಇರಲಿದೆ. ಬಳಿಕ ಜಡ್ಕಲ್ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಬಸ್ ಮಧ್ಯಾಹ್ನ 1:15ರವೆಗೆರೆ ತಂಗಲಿದೆ. ಬಳಿಕ ಊಟದ ಸಮಯಕ್ಕೆ ಜಡ್ಕಲ್, ಹಳ್ಳಿಹೊಳೆ ಮಾರ್ಗವಾಗಿ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ಬಸ್ ಮಧ್ಯಾಹ್ನ 3 ಗಂಟೆಯ ತನಕ ಕಮಲಶಿಲೆಯಲ್ಲಿ ಇರಲಿದೆ. ಸಂಜೆ 4:15ರ ಹೊತ್ತಿಗೆ ಜಡ್ಕಲ್, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ, ಬಿದ್ಕಲ್ ಕಟ್ಟೆ, ಸ್ಯಾಬರ ಕಟ್ಟೆ, ಬಾರ್ಕೂರು, ಬ್ರಹ್ಮಾವರ, ಸಂತೆಕಟ್ಟೆ ಮಾರ್ಗವಾಗಿ ಬಸ್ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಲಿದೆ. ಸಂಜೆ 6 ಗಂಟೆ ಮೂವತ್ತು ನಿಮಿಷಕ್ಕೆ ಸರಿಯಾಗಿ ದಸರಾ ದರ್ಶನ ಬಸ್ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ತಲುಪಲಿದೆ.
ಮಂಗಳೂರು ದಸರಾ ದರ್ಶನ ಬಸ್ ಪ್ಯಾಕೇಜ್ ಯಶಸ್ವಿಯಾದ ಬಳಿಕ ವೋಲ್ವೋ ಬಸ್ ಅನ್ನು ಇಳಿಸಿತ್ತು. ಮೂರನೇ ಪ್ರಯತ್ನವಾಗಿ ಉಡುಪಿಗೂ ದಸರಾ ವಿಶೇಷ ಪ್ಯಾಕೇಜ್ ಅನ್ನು ಕೆಎಸ್ಆರ್ಟಿಸಿ ಘೋಷಣೆ ಮಾಡಿದೆ.