ಮಂಗಳೂರು: ಜಾತ್ರೆಗಳಲ್ಲಿ ಶುರುವಾದ ಧರ್ಮ ದಂಗಲ್ ಈಗ ಮತ್ತೆ ಕೇಳಿಬಂದಿದೆ. ಜಾತ್ರೆಯ ಸಮಯದಲ್ಲಿ ಅನ್ಯ ಮತೀಯರ ವ್ಯಾಪಾರಕ್ಕೆ ಹಲವು ಕಡೆ ನಿರ್ಬಂಧ ಹೇರಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕೂಡ ಕಾರಣವಾಗಿತ್ತು. ಜಾತ್ರೆ ಮುಗಿದ ಬಳಿಕ ಈ ವಿವಾದ ತೆರೆಗೆ ಸರಿದಿತ್ತು. ಈಗ ಮತ್ತೆ ಆ ವಿವಾದ ಕೇಳಿಬಂದಿದೆ. ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಗುತ್ತಿಗೆ ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರಿನ ಪ್ರಸಿದ್ಧ ಕುಡುಪು ಅನಂತ ಪದ್ಮನಾಭ ದೇವಸ್ಥಾನಕ್ಕೆ ದೇವರ ಸೇವೆಗೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಾಳೆಹಣ್ಣು ಪೂರೈಕೆ ಗುತ್ತಿಗೆಯನ್ನು ಪ್ರತಿವರ್ಷ ನವೀಕರಿಸಲಾಗುತ್ತದೆ. ಈ ವರ್ಷದ ಗುತ್ತಿಗೆ ಜೂ.30ಕ್ಕೆ ಕೊನೆಗೊಳ್ಳುತ್ತಿದ್ದು, ಮುಂದಿನ ಸಾಲಿನ ಗುತ್ತಿಗೆಗೆ ಟೆಂಡರ್ ಕರೆಯಲಾಗಿತ್ತು.
ಈ ಟೆಂಡರ್ನಲ್ಲಿ ಕಡಿಮೆ ದರ ನಮೂದಿಸಿರುವ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ನೀಡಲಾಗಿದೆ. ಟೆಂಡರ್ನಲ್ಲಿ ಮೂವರು ಹಿಂದುಯೇತರರು ಹಾಗೂ ಓರ್ವ ಹಿಂದು ವ್ಯಾಪಾರಿ ಭಾಗವಹಿಸಿದ್ದರು. ಈ ವಿಚಾರ ಬಹಿರಂಗವಾಗುತ್ತಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಉಗುಳಿದ ಹಣ್ಣನ್ನು ದೇವರ ಸೇವೆಗೆ ಅರ್ಪಿಸಲು ಮುಂದಾದ ಆಡಳಿತ ಮಂಡಳಿ ಎಂದೆಲ್ಲಾ ಟೀಕೆಗಳು ಕೇಳಿಬಂದಿವೆ.
ಕಾನೂನು ಏನು ಹೇಳುತ್ತದೆ?
ಧಾರ್ಮಿಕ ದತ್ತಿ ಇಲಾಖೆಯ 2002-03ರ ತಿದ್ದುಪಡಿ ಪುಕಾರ ಹಿಂದು ಧಾರ್ಮಿಕ ಕೇಂದ್ರಗಳ ಯಾವುದೇ ವಹಿವಾಟನ್ನು ಅನ್ಯಧರ್ಮದವರಿಗೆ ನೀಡುವಂತಿಲ್ಲ. ಹೀಗಿದ್ದೂ ಕುಡುಪು ದೇವಳಕ್ಕೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಮುಸ್ಲಿಂ ವ್ಯಾಪಾರಿಗೆ ನೀಡಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಹಿಂದು ಮುಖಂಡರು ಆಗ್ರಹಿಸಿದ್ದಾರೆ.