ಮಂಗಳೂರು: ಪಣಂಬೂರು ಬೀಚ್ನಲ್ಲಿದ್ದ ಅನಧಿಕೃತ 6 ಫಾಸ್ಟ್ ಪುಡ್ ಅಂಗಡಿ ಸೇರಿದಂತೆ 9 ಅಂಗಡಿಗಳನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ದಾಳಿ ನಡೆಸಿ ಸ್ವಚ್ಚತೆಯ ಕೊರತೆ ಕಂಡುಬಂದಿರುವುದರಿಂದ ತಕ್ಷಣ ಮುಚ್ಚಿಸುವಂತೆ ಆದೇಶ ಹೊರಡಿಸಿದ್ದಾರೆ. ಪಣಂಬೂರು ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ‘ಸ್ವಚ್ಛ ಸುಂದರ ಕಿನಾರೆ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕಿನಾರೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬೀಚ್ ನ ಸುತ್ತಮುತ್ತ ಕಾರ್ಯಾಚರಿಸುತ್ತಿರುವ ಮಳಿಗೆಗಳ ಬಳಿಯೂ ಕಸ ರಾಶಿ ಬಿದ್ದಿದ್ದು ಕಂಡು ಮತ್ತಷ್ಟು ಗರಂ ಆದರು. ಈ ಮಳಿಗೆಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಅವುಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಮಳಿಗೆಗಳ ವರ್ತಕರು, ‘ನಾವು ಇಲ್ಲಿ 40 ವರ್ಷಗಳಿಂದ ಇದ್ದೇವೆ. ನಮ್ಮನ್ನು ದಿಢೀರ್ ತೆರವುಗೊಳಿಸುವಂತಿಲ್ಲ’ ಎಂದು ವಾದಿಸಿದರು. ಇದಕ್ಕೆ ಸೊಪ್ಪುಹಾಕದೆ ಅಧಿಕಾರಿಗಳು ಮಳಿಗೆಗಳಲ್ಲಿದ್ದ ಪರಿಕರಗಳನ್ನು ತೆರವುಗೊಳಿಸಿದರು.