ಮಂಗಳೂರು: ಬಸ್ನಲ್ಲಿ ನಿಲ್ದಾಣದಲ್ಲಿ ಜತೆಯಾಗಿ ಸಾಗುತ್ತಿದ್ದ ಭಿನ್ನ ಕೋಮಿನ ಯುವಕ ಮತ್ತು ಯುವತಿಯನ್ನು ಗದರಿಸಿದ ಹಾಗೂ ಅವರ ಭಾವಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚುವ ಮೂಲಕ ಯುವತಿಯ ಗೌರವಕ್ಕೆ ದಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.
ಅನ್ಯಮತೀಯ ಯುವಕ ಮತ್ತು ಯುವತಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು. ಇದೀಗ ಸಂಜೆ ವೇಳೆ ಒಟ್ಟು ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಉಡುಪಿ ಜಿಲ್ಲೆಯ ಬಸ್ಸು ನಿಲ್ದಾಣದಲ್ಲಿ ಮಂಗಳೂರು ನಗರದ ಕಾಲೇಜ್ ಒಂದರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯನ್ನು ಅಡ್ಡ ಹಾಕಿ ಗದರಿಸಲಾಗಿತ್ತು ಎಂದು ವಿಡಿಯೋ ಹಾಗೂ ಅದಕ್ಕೆ ಸಂಬಂಧಿಸಿದ ಪೋಸ್ಟ್ ಶುಕ್ರವಾರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿತ್ತು . ಈ ವಿಡಿಯೋ ಹಾಗೂ ಇದೇ ಘಟನೆಗೆ ಸಂಬಂದಿಸಿದ ಇನ್ನೆರಡು ವಿಡೀಯೊಗಳ ಪರಿಶೀಲನೆ ನಡೆಸಿದ ಮಂಗಳೂರು ಪೊಲೀಸರು ಘಟನೆಯೂ ಮಂಗಳೂರಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ನಡೆದಿತ್ತು ಎನ್ನುವುದನ್ನು ಕಂಡು ಕೊಂಡಿದ್ದರು.
ಈ ಹಿನ್ನಲೆಯಲ್ಲಿ ಪ್ರಕರಣ ಸೋ ಮೋಟೋ ಪ್ರಕರಣ ದಾಖಲಿಸಿಕೊಂಡ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು .ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ , ರಾಘವೇಂದ್ರ, ರಂಜೀತ್ ಹಾಗೂ ಪವನ್ ಎಂಬವರನ್ನು ಅವರು ಬಂಧಿಸಿದ್ದಾರೆ ಆರೋಪಿಗಳ ವಿರುದ್ದ ಐಪಿಸಿ ಕಲಂ 153 ಎ ಹಾಗೂ 354 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
.ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವುದು ಮತ್ತು ಯುವತಿಯ ಗೌರವಕ್ಕೆ ಧಕ್ಕೆ ತಂದಿರುವ ಕುರಿತಂತೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಯುವತಿ ಉಡುಪಿ ಜಿಲ್ಲೆಯವರಾಗಿದ್ದು, ಯುವಕ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಇವರ ಪೋಷಕರನ್ನು ಕರೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡು ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದ್ದರು.
ಕೃತ್ಯವೂ ಉಡುಪಿಯಲ್ಲಿ ನಡೆದಿದೆ ಎಂಬ ಮಾಹಿತಿಯೂ ವ್ಯಾಪಕವಾಗಿ ಹಬ್ಬಿದ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂಬ ಉದ್ದೇಶದಿಂದ ಮಂಗಳೂರು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿರಲಿಲ್ಲ . ಆದರೆ ಕೃತ್ಯ ಮಂಗಳೂರು ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ ಎಂಬ ಮಾಹಿತಿ ತಿಳಿಯುತ್ತಲೇ ಹಾಗೂ ನೊಂದ ಯುವಕ ಯುವತಿ ಮುಂದೆ ಬಂದು ದೂರು ನೀಡದ ಹಿನ್ನಲೆಯಲ್ಲಿ ಅಲ್ಲೊಂದು ಅಪರಾಧ ಕೃತ್ಯ ಎಸಗಲಾಗಿದೆ ಎಂಬ ಕಾರಣಕ್ಕೆ ಪೊಲೀಸರೇ ಸೋ ಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.