ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯನೊಬ್ಬನ ಕಾಮಪುರಾಣ ಬಯಲಾಗಿದೆ. ಈತನನ್ನು ಡಾ.ರತ್ನಾಕರ್ ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದವನಾದ ರತ್ನಾಕರ್, ಮಂಗಳೂರಿನ ದೇರಳಕಟ್ಟೆಯಲ್ಲಿ ವಾಸವಾಗಿದ್ದಾನೆ.
ಸರ್ಕಾರಿ ಆಸ್ಪತ್ರೆಯ ಆವರಣದ ಕೊಠಡಿಯಲ್ಲಿ ಸರಸ ಸಲ್ಲಾಪವಾಡುವ ರತ್ನಾಕರ್ ತನ್ನ ಮುಖ್ಯಸ್ಥ ಹುದ್ದೆಯನ್ನೇ ಬಂಡವಾಳವಾಗಿಸಿಕೊಂಡು, ತನ್ನ ಅಡಿ ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜತೆ ಸರಸ ಸಲ್ಲಾಪವಾಡುತ್ತಿದ್ದ. ಇದನ್ನು ವಿರೋಧಿಸುವ ಅಥವಾ ದೂರು ಕೊಡಲು ಮುಂದಾಗುವ ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಡಾ. ರತ್ನಾಕರ್ ರಾಸಲೀಲೆಯ ಹಲವು ವಿಡಿಯೋಗಳು ವೈರಲ್ ಆಗಿದೆ.
ಇದನ್ನೂ ಓದಿ: ಮಂಗಳೂರು: ರಸಿಕ ರತ್ನಾಕರನ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಈ ಹಿಂದೆಯೂ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ವರದಿಯಂತೆ ಡಾಕ್ಟರ್ ರತ್ನಾಕರ್ ಸಸ್ಪೆಂಡ್ ಆಗಿದ್ದರು. ಆದರೆ ಸರ್ಕಾರದ ಆದೇಶಕ್ಕೆ ಸ್ಟೇ ತಂದು ಮತ್ತೆ ಅದೇ ಕೃತ್ಯ ಮುಂದುವರಿಸುತ್ತಿದ್ದಾನೆ. ಕಿರುಕುಳ ಪ್ರಕರಣದಲ್ಲಿಯೇ ಭಟ್ಕಳಕ್ಕೆ ವರ್ಗಾವಣೆಯಾಗಿ ಮತ್ತೆ ಈಗ ಮಂಗಳೂರಿಗೇ ಬಂದಿದ್ದಾನೆ ಎಂದು ತಿಳಿದುಬಂದಿದೆ.