ಮಂಗಳೂರು: ಕಾಲೇಜು ವಿದ್ಯಾರ್ಥಿಯೋರ್ವ ಮನನೊಂದು ಪಿಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಕುಮಾರಸ್ವಾಮಿ ಬಡವಾಣೆಯ ನಿವಾಸಿ ಭಾಸ್ಕರ್ ಎಂಬವರ ಪುತ್ರ ಭರತ್ ಭಾಸ್ಕರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಕರಾವಳಿ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್ ನಲ್ಲಿ ತಂಗಿದ್ದನು, ನಂತರ ಹಾಸ್ಟೆಲ್ ನ ಊಟೋಪಚಾರ ಸರಿ ಇರದ ಕಾರಣ ಈತನು ಬೇರೆ ಬಾಡಿಗೆ ಮನೆಗೆ ಹೋಗಿದ್ದು, ಅಲ್ಲಿ ಕೂಡಾ ಊಟದ ವ್ಯವಸ್ಥೆ ಸರಿ ಇರದ ಕಾರಣ, ಸುಮಾರು ಒಂದು ತಿಂಗಳಿನಿಂದ ಪೇಯಿಂಗ್ ಗೆಸ್ಟ್’ಗೆ ವಾಸ್ತವವನ್ನು ಬದಲಾಯಿಸಿದ್ದಾನೆ.
ಇನ್ನು ಭರತ್ ಮನೆಗೆ ತೆರಳಿದ್ದಾಗ ಕಾಲೇಜಿನ ಸ್ಥಿತಿಯನ್ನು ವಿವರಿಸಿದ್ದಾನೆ. ಕಾಲೇಜಿನ ಪ್ರಾಧ್ಯಾಪಕ ರಾಹುಲ್ ಎಂಬವರು ಮನಸ್ಸಿಗೆ ನೋವಾಗುವಂತೆ ಎಲ್ಲಾ ವಿದ್ಯಾರ್ಥಿಗಳ ಮುಂದೆ ನನ್ನನ್ನು ಅವಹೇಳನ ಮಾಡುತ್ತಾರೆ. ಎಂದು ಅಳಲು ತೋಡಿಕೊಂಡಿದ್ದಾನೆ. ಇದಕ್ಕೆ ಪೋಷಕರು ಪ್ರಾಧ್ಯಾಪಕರಿಗೆ ಕರೆ ಮಾಡಿ ಮಕ್ಕಳಲ್ಲಿ ಸರಿಯಾಗಿ ವ್ಯವಹರಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೂ ಪ್ರಾಧ್ಯಾಪಕರು ಧಿಮಾಕಿನಲ್ಲಿ ಉತ್ತರ ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು 15-03-2022 ರಂದು ಭರತ್ ಪ್ರಾಜೆಕ್ಟ್ ರಿಪೋರ್ಟ್ಗೆ ಸಹಿ ಹಾಕಲೆಂದು ಪ್ರಾಧ್ಯಾಪಕ ರಾಹುಲ್ ಬಳಿ ಹೋದಾಗ ನಾನು ಸಹಿ ಹಾಕುವುದಿಲ್ಲ ಪರೀಕ್ಷೆಗೆ ಹಾಜರಾಗಲು ಬಿಡುವುದಿಲ್ಲ ಎಂದಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿ ತಾಯಿಗೆ ವಾಟ್ಸಾಪ್ ಮೂಲಕ “ಅಮ್ಮ ನನಗೆ ಇಲ್ಲಿ ಬದುಕಲು ಸಾಧ್ಯವಿಲ್ಲ, ಕಾಲೇಜ್ ಸರಿಯಿಲ್ಲ. ಕಾಲೇಜಿನಲ್ಲಿ ಪ್ರಾಧ್ಯಾಪಕರಿಲ್ಲ, ಆದ್ದರಿಂದ ನಾನು ಈ ಲೋಕವನ್ನು ತ್ಯಜಿಸುತ್ತಿದ್ದೇನೆ’ ಎಂದು ಹೇಳಿ ಪಿಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಕಾಲೇಜಿನ ಪ್ರಾಧ್ಯಾಪಕ ರಾಹುಲ್ ಹಾಗೂ ಕಾಲೇಜಿನ ಚೇರ್ಮ್ಯಾನ್ ಗಣೇಶ್ ರಾವ್ ವಿರುದ್ಧ ಪ್ರಕರಣ ದಾಖಲಾಗಿದೆ.