



ಮಂಗಳೂರು: ನಾಯಿಗಳಿಗೆಂದು ಬೇಯಿಸಿಟ್ಟ ಅನ್ನಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದಿರುವ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಬಳ್ಳಾಲ್ ಭಾಗ್ ನಿವಾಸಿಯಾಗಿರುವ ರಜನಿ ಶೆಟ್ಟಿಯವರು ಮನೆಯಲ್ಲಿಯೇ 38 ಬೀದಿ ನಾಯಿ ಸಹಿತ, ಬೆಕ್ಕು, ಗಿಡುಗ, ಕಾಗೆಗಳಿಗೆ ಆಶ್ರಯ ನೀಡಿದ್ದಾರೆ.
ಇವುಗಳಲ್ಲಿ ಬಹುತೇಕ ಪ್ರಾಣಿಗಳಿ ಗಾಯಾಗಳಿಂದ ಬಳಲುತ್ತಿವೆ. ಗಾಯಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆರೈಕೆಯನ್ನೂ ಮಾಡುತ್ತಿದ್ದಾರೆ. ನಾಯಿಗಳು ಬೊಗಳುವುದರಿಂದ ಕಿರಿಕಿರಿ ಆಗುತ್ತಿದೆ ಎಂಬ ನೆಪವನ್ನೂ ಒಡ್ಡಿ ಸ್ಥಳೀಯ ಮಹಿಳೆ ಆಗಾಗ ಕಿರಿಕಿರಿ ಮಾಡುತ್ತಿದ್ದರು. ಅಲ್ಲದೇ ಸಹಿಸಿಕೊಳ್ಳಲು ಆಗದೇ ನಾಯಿಗಳಿಗೆ ಉಣಬಡಿಸಲು ಬೇಯಿಸಿಟ್ಟ ಆಹಾರಕ್ಕೆ ಮಹಿಳೆ ಸೀಮೆಎಣ್ಣೆ ಸುರಿದಿದ್ದಾರೆ.

ಪ್ರತಿನಿತ್ಯ 60 ಕೆ.ಜಿ. ಅನ್ನ ತಯಾರಿಸುವ ರಜನಿ ಶೆಟ್ಟಿಯವರು, ನಿತ್ಯ 800ಕ್ಕೂ ಅಧಿಕ ನಾಯಿಗಳಿಗೆ ಆಹಾರ ನೀಡುತ್ತಾರೆ. ಸ್ವಾರ್ಥರಹಿತವಾಗಿ ಕೆಲಸ ಮಾಡುತ್ತಿರುವ ರಜನಿ ಶೆಟ್ಟಿ, ಇದೀಗ ಸ್ಥಳೀಯ ಮಹಿಳೆಯ ಉಪಟಳ ಸಹಿಸಲಾರದೆ ಮನೆಯ ಸುತ್ತ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಅಲ್ಲದೇ ನಾಯಿಗಳು ಹೊರಹೋಗದಂತೆ ಬೇಲಿಯನ್ನು ಅಳವಡಿಸಿದ್ದಾರೆ ಹಾಗೂ ಅಮಾನವೀಯವಾಗಿ ವರ್ತಿಸುವ ಸ್ಥಳೀಯ ಮಹಿಳೆಯ ವಿರುದ್ಧ ರಜನಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಇಪ್ಪತ್ತೆರಡು ವರ್ಷಗಳಿಂದ ನಾಯಿಗಳಿಗೆ ಆಹಾರ ಹಾಕುತ್ತಿರುವ ರಜನಿ ಶೆಟ್ಟಿ ಯಾವುದೇ ಸ್ವಾರ್ಥವಿಲ್ಲದ 800 ನಾಯಿಗಳಿಗೆ ಪ್ರತಿದಿನ ಊಟ ಹಾಕುತ್ತಿದ್ದಾರೆ. ಮೂಕ ಪ್ರಾಣಿಗಳ ಹಸಿವಿನ ರೋಧನೆ ನೋಡಿ ಆಹಾರ ಹಾಕಲು ಆರಂಭಿಸಿದ ಅವರು, ನಿತ್ಯ 60 ಕೆ.ಜಿ. ಅಕ್ಕಿ, ಚಿಕನ್ ವೇಸ್ಟ್ ಅನ್ನು ಬೇಯಿಸಿ ಆಹಾರ ತಯಾರು ಮಾಡುತ್ತಾರೆ, ಲಾಕ್ಡೌನ್ ಬಳಿಕ ರಜನಿ ಶೆಟ್ಟಿಯವರಿಗೆ ಸಾರ್ವಜನಿಕರ ಸಹಾಯಹಸ್ತ ಸಿಗಲಾರಂಭಿಸಿದೆ.