ದೈವಕ್ಕೇ ಸ್ವೀಟ್ಕಾರ್ನ್ ನೀಡಿ ದೈವದ ಹೃದಯವನ್ನು ಮಾತ್ರವಲ್ಲ ಕರಾವಳಿಯ ದೈವ ಭಕ್ತರ ಮನಗೆದ್ದ ಮಗುವಿನ ವೀಡಿಯೊವೊಂದು ನಿನ್ನೆಯಿಂದ ಎಲ್ಲರ ಸ್ಟೇಟಸ್ ನಲ್ಲೂ ರಾರಾಜಿಸುತ್ತಿದೆ. ಹಾಗಾದರೆ ಆ ಮಗು ಯಾರು, ಈ ದೃಶ್ಯ ನಡೆದಿದ್ದು ಎಲ್ಲಿ ಅಂತೀರಾ.. ಇಲ್ಲಿದೆ ಸಂಪೂರ್ಣ ಸ್ಟೋರಿ..
ಮಂಗಳೂರಿನ ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ಗುರುವಾರ ನಡೆದ ದೊಂಪದ ಬಲಿ ಉತ್ಸವದಲ್ಲಿ ಕಾಂತೇರಿ ಧೂಮಾವತಿ ದೈವದ ನರ್ತನ ಸೇವೆ ನಡೆಯುತ್ತಿತ್ತು. ರಾತ್ರಿ ಸುಮಾರು ೧೧ ಗಂಟೆಯ ವೇಳೆಗೆ ಕಾಂತೇರಿ ಧೂಮಾವತಿ ದೈವ ಮಕ್ಕಳೊಂದಿಗೆ ಚೇಷ್ಟೆ ಮಾಡುತ್ತಿದ್ದ ಸಂದರ್ಭ ಶಕ್ತಿನಗರ ಪ್ರಶಾಂತಿ ನಗರದ ದೀಪಕ್ ಮತ್ತು ದೀಪ್ತಿ ದಂಪತಿ ಪುತ್ರ ಶಮಿತ್ ಸ್ವೀಟ್ಕಾರ್ನ್ ತಿನ್ನುತ್ತಾ ನೇಮೋತ್ಸವ ವೀಕ್ಷಣೆ ಮಾಡುತ್ತಿದ್ದ. ಇದೇ ವೇಳೆ ಕಾಂತೇರಿ ಧೂಮಾವತಿ ದೈವ ನೇರವಾಗಿ ಮಗುವಿನ ಬಳಿ ಬಂದು ತನಗರ ತಿಂಡಿ ನೀಡುವಂತೆ ಅಂಗೈ ಚಾಚಿತು. ದೈವದ ಎದುರು ಏನೂ ಆತಂಕ ಪಡದ ಮುಗ್ಧ ಮಗು ಚಮಚದಲ್ಲಿದ್ದ ಸ್ವೀಟ್ಕಾರ್ನ್ ದೈವದ ಅಂಗೈಗೆ ಹಾಕಿತು.
ಆದರೆ ಅದು ಅಚಾನಕ್ ಆಗಿ ನೆಲಕ್ಕೆ ಬಿತ್ತು. ಈ ಸಂದರ್ಭದಲ್ಲಿ ದೈವ ತನಗೆ ಹಸಿವು ಆಗುತ್ತದೆ ಆದ ಕಾರಣ ಮಗುವಿನಲ್ಲಿ ತಿಂಡಿ ಕೇಳುತ್ತಿದ್ದೇನೆ ಎಂದು ಗ್ರಾಮಸ್ಥರಲ್ಲಿ ಕೈ ಸನ್ನೆ ಮಾಡಿ ಮತ್ತೆ ಮಗುವಿನಲ್ಲಿ ಸ್ವೀಟ್ಕಾರ್ನ್ಗಾಗಿ ಕೈಯೊಡ್ಡಿದಾಗ ಮಗು ಮತ್ತೆ ಚಮಚದಲ್ಲಿ ದೈವದ ಕೈ ಗೆ ಸ್ವೀಟ್ ಕಾರ್ನ್ ನೀಡಿ ತನ್ನ ಮುಗ್ಧತೆಯನ್ನು ತೋರಿದೆ. ಮಗುವಿನ ಮುಗ್ಧತೆಗೆ ತಲೆತೂಗಿದ ದೈವ ಮಗುವಿನ ಹಣೆಗೆ ತನ್ನ ಮುಖದ ಬಣ್ಣವನ್ನು ಪ್ರಸಾದವನ್ನಾಗಿ ಹಚ್ಚಿ ಆಶಿರ್ವದಿಸಿ ಮತ್ತೆ ತನ್ನ ನರ್ತನ ಸೇವೆಯನ್ನು ಮುಂದುವರೆಸಿತು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಎಲ್ಲರ ಸ್ಟೇಟಸ್ನಲ್ಲಿ ರಾರಾಜಿಸುತ್ತಿದೆ.