




ಮಂಗಳೂರು: ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ, ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿತರನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೂನ್ 6 ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಬಂಧಿತರಲ್ಲಿ ಮೊದಲ ಆರೋಪಿ ಶ್ರೀನಿವಾಸ ಸಿರಯಾನ್ (56), ಮೈಲಾರಲಿಂಗ ಸ್ಟ್ರೀಟ್, ಕೋಟೆ ಬಡಾವಣೆ, ಚೆನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ. ಇವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 152/2017ರಡಿ ಕಲಂ 3(1), 3(2ಎ), 4, 9 ಐಟಿಪಿ ಕಾಯ್ದೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಾನ್ಯ 6ನೇ ಜೆಎಂಎಫ್ಸಿ ನ್ಯಾಯಾಲಯ, ಮಂಗಳೂರು ಇಲ್ಲಿ ಸಿ.ಸಿ. ನಂ. 1108/2025ರಂತೆ ವಿಚಾರಣೆಯಲ್ಲಿದೆ. ಪ್ರಕರಣ ಸಂಬಂಧ ಹಲವು ಬಾರಿ ಜಾಮೀನು ರಹಿತ ವಾರಂಟ್ ಜಾರಿಗೊಂಡಿದ್ದರೂ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಇನ್ನೊಬ್ಬ ಆರೋಪಿ ಉಪೇಂದ್ರ ಡಿ.ಸಿ. @ ಅಭಿಷೇಕ್ (28), ದೊಡ್ಡಗಾವನಹಳ್ಳಿ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ. ಇವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆ ಅ.ಕ್ರ. 102/2019ರಡಿ ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು, ಮಾನ್ಯ 6ನೇ ಜೆಎಂಎಫ್ಸಿ ನ್ಯಾಯಾಲಯ, ಮಂಗಳೂರು ಇಲ್ಲಿ ಸಿ.ಸಿ. ನಂ. 815/2021ರಂತೆ ವಿಚಾರಣೆಯಲ್ಲಿದೆ. ನ್ಯಾಯಾಲಯದ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಆರೋಪಿ ಹಾಜರಾಗಿರಲಿಲ್ಲ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೂನ್ 6ರಂದು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿತರನ್ನೂ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ಕಲಂ 269 ಬಿ.ಎನ್.ಎಸ್–2023ರಡಿ ಪ್ರತ್ಯೇಕ ಪ್ರಥಮ ವರ್ತಮಾನ ವರದಿ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬಳಿಕ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ







