ಮದುವೆಯಾದ ಒಂಬತ್ತು ತಿಂಗಳಲ್ಲಿ ಗೃಹಿಣಿಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮಾದಾಪಟ್ಟಣ ಗ್ರಾಮದ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ ದಂಪತಿಗಳ ಮಗಳಾದ ಶಾಲಿನಿ (22) ಮೃತಪಟ್ಟ ಮಹಿಳೆ.
ಕಳೆದ ಒಂಬತ್ತು ತಿಂಗಳ ಹಿಂದೆ ಶಾಲಿನಿ ಅವರನ್ನ ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಸರಳ ಮದುವೆ ಮಾಡಿಕೊಟ್ಟಿದ್ದ ತಂದೆ ಶಾಂತಪ್ಪರವರು 50 ಸಾವಿರ ರೂಪಾಯಿ ವರದಕ್ಷಿಣೆ ಸಹ ನೀಡಿದ್ದರು. ಆದರೆ ಪತಿ ಮಹೇಶ್ ಹಾಗೂ ಆತನ ಪೋಷಕರು ಶಾಲಿನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಗಾಗ ಜಗಳವಾಡಿದ್ದರು. ಇದರಿಂದ ಶಾಲಿನಿ ತವರು ಮನೆಗೆ ಸೇರಿದ್ದಳು.
ಆದರೆ ಶಾಲಿನಿಯ ಮೃತದೇಹ ಜಮೀನಿನ ಬಾವಿಯಲ್ಲಿ ತೇಲಾಡುತ್ತಿರುವುದನ್ನ ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸುತ್ತಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನ ತಡೆಯಲು ಪೊಲೀಸರು ಆರೋಪಿ ಮಹೇಶ್ನನ್ನ ಬಂಧಿಸಿದ್ದಾರೆ. ಆದರೆ ಆತನ ತಂದೆ ತಾಯಿಯನ್ನ ವಶಕ್ಕೆ ಪಡೆಯಲಿಲ್ಲ. ಹೀಗಾಗಿ ಶಾಲಿನಿ ಕುಟುಂಬಸ್ಥರು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.