ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ನಮ್ಮ ಆಹಾರ ಕ್ರಮ ಜೀವನಶೈಲಿ ಮೊದಲಾದವುಗಳ ಪರಿಣಾಮದಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ನಮ್ಮನ್ನು ಆವರಿಸುತ್ತಿದೆ. ಅದರಲ್ಲೂ ಡಯಾಬಿಟಿಸ್ ಎನ್ನುವುದು ಜನರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.
ಮೇಧೋಜೀರಕ ಗ್ರಂಥಿಯು ಕಡಿಮೆ ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸದೆ ಇದ್ದಾಗ ಈ ದೀರ್ಘಕಾಲದ ಕಾಯಿಲೆ ಸಂಭವಿಸುತ್ತದೆ.
ಸಕ್ಕರೆ ಕಾಯಿಲೆ ಆರಂಭವಾದರೆ ಅದಕ್ಕೆ ವೈದ್ಯರ ಬಳಿ ಸಲಹೆ ಪಡೆದು ಔಷಧ ತೆಗೆದುಕೊಳ್ಳಬೇಕು. ಆದರೆ ನೀವು ನೈಸರ್ಗಿಕವಾಗಿ ಕೆಲವು ಆಹಾರ ಕ್ರಮಗಳನ್ನು ಅನುಸರಿಸುವುದರ ಮೂಲಕ ಡಯಾಬಿಟಿಸ್ ಹೆಚ್ಚಾಗದಂತೆ ನಿಯಂತ್ರಣದಲ್ಲಿ ಇಡಬಹುದು. ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಆಗ ಮಧುಮೇಹ ಅನ್ನುವುದು ದೊಡ್ಡ ಸಮಸ್ಯೆಯಾಗಿ ಕಾಡುವುದಿಲ್ಲ.
ಕರೇಲಾ ಜ್ಯೂಸ್ (ಹಾಗಲಕಾಯಿ ಜ್ಯೂಸ್)
ಹಾಗಲಕಾಯಿ ರಸ ಮಧುಮೇಹಗಳಿಗೆ ಅತ್ಯುತ್ತಮವಾದ ಪಾನೀಯ. ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನ ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಅನ್ನು ಸಕ್ರಿಯಗೊಳಿಸುತ್ತದೆ. ಕರೇಲಾ ಜ್ಯೂಸ್ ಸೇವಿಸುವುದರಿಂದ ಇದು ದೇಹದಲ್ಲಿ ಸಕ್ಕರೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಇದು ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತನೆ ಮಾಡುವುದಿಲ್ಲ. ಜೊತೆಗೆ ದೇಹದ ತೂಕ ಕಳೆದುಕೊಳ್ಳುವಲ್ಲಿಯೂ ಕೂಡ ಕರೇಲಾ ಜ್ಯೂಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಿ ಚರಂಟಿನ್ ಎನ್ನುವ ಏಜೆಂಟ್ ಅನ್ನು ಸಕ್ರಿಯವಾಗಿಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತದೆ.
ನೈಸರ್ಗಿಕವಾಗಿ ಮಧುಮೇಹ ನಿಯಂತ್ರಿಸಿಕೊಳ್ಳಬೇಕು ಅಂದ್ರೆ ಮೆಂತ್ಯದ ನೀರು ಬಹಳ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಟೈಪ್ 2 ಡಯಾಬಿಟಿಸ್ ಇರುವವರು ಮೆಂತ್ಯದ ಬೀಜದ ನೀರನ್ನ ಕುಡಿಯುವುದು ತುಂಬಾನೇ ಒಳ್ಳೆಯದು. ನೀರಲ್ಲಿ 10 ಗ್ರಾಂ ಮೆಂತ್ಯ ಬೀಜಗಳನ್ನು ನೆನೆಸಿಟ್ಟು ಆ ನೀರನ್ನು ಕುಡಿಯಬೇಕು ಇದರಿಂದ ಸಕ್ಕರೆಯ ಮಟ್ಟ ದೇಹದಲ್ಲಿ ಕಡಿಮೆಯಾಗುತ್ತದೆ. ದೇಹದಲ್ಲಿನ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆ ಮಟ್ಟವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಕ್ಕರೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಕೂಡ ಮೆಂತ್ಯ ನೀರು ಉಪಯೋಗಕಾರಿಯಾಗಿದೆ.
ಬಾರ್ಲಿ ನೀರು ಕರಗದ ನಾರಿನ ಅಂಶವನ್ನು ಹೊಂದಿರುತ್ತದೆ ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಬಾರ್ಲಿ ನೀರನ್ನು ಕುಡಿಯುವುದು ತುಂಬಾನೇ ಒಳ್ಳೆಯದು.
ಚಿಯಾ ಸೀಡ್ಸ್ ಅನ್ನು ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಚೀಯ ಬೀಜಗಳನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ನಂತರ ಕುಡಿದರೆ ಒಳ್ಳೆಯದು. ಬೆಳಿಗ್ಗೆ ಉಪಹಾರದ ನಂತರ ಚಿಯಾ ಬೀಜದ ನೀರನ್ನು ಸೇವಿಸಿ. ಇದು ದೇಹಕ್ಕೂ ತಂಪು ಜೊತೆಗೆ ರಕ್ತದ ಮಟ್ಟವನ್ನು ಕೂಡ ನಿಯಂತ್ರಣಕ್ಕೆ ತರುತ್ತದೆ.
ಮಧುಮೇಹ ಮಾತ್ರವಲ್ಲದೆ ದೀರ್ಘಕಾಲದ ವಿವಿಧ ಕಾಯಿಲೆಗಳಿಗೆ ರಾಮಬಾಣ. ಉತ್ಕರ್ಷಣ ನಿರೋಧಕ ಹಾಗೂ ಆಂಟಿ ಕ್ಯಾನ್ಸರ್ ಗುಣಲಕ್ಷಣಗಳು ಕೂಡ ಇದ್ದು, ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಇದು ಸಹಾಯಮಾಡುತ್ತದೆ. ದಿನವೂ ನಿಯಮಿತವಾಗಿ ಕ್ಯಾಮೋಮೈಲ್ ಚಾಹವನ್ನು ಸೇವಿಸುತ್ತಾ ಬಂದರೆ ಇನ್ಸುಲಿನ್ ಪ್ರಮಾಣವು ದೇಹದಲ್ಲಿ ಸರಿ ಹೋಗುತ್ತದೆ. ಕ್ಯಾಮೊಮೈಲ್ ಚಹಾಕ್ಕೆ ನಿಂಬೆರಸ ಸೇರಿಸಿ ಕುಡಿಯಬಹುದು.
ಹಸಿರು ತರಕಾರಿಗಳು, ಮೂಲಂಗಿ ಮೊದಲಾದ ತರಕಾರಿಗಳ ಜ್ಯೂಸ್ ತಯಾರಿಸಿ ಕುಡಿಯಬಹುದು ಸಕ್ಕರೆ ಅಂಶ ಕಡಿಮೆ ಇರುವ ತರಕಾರಿಗಳಿಂದ ಜ್ಯೂಸ್ ಮಾಡಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇಂಥ ತರಕಾರಿ ಜ್ಯೂಸ್ ಸೇವಿಸುವಾಗ ಅದಕ್ಕೆ ಸಕ್ಕರೆಯನ್ನು ಬಳಸಬೇಡಿ ಬದಲಿಗೆ ಸ್ವಲ್ಪ ಉಪ್ಪು ಅಥವಾ ನಿಂಬೆರಸ ಹಿಂಡಿ ಸೇವಿಸಿದರೆ ಒಳ್ಳೆಯದು.
ಹರ್ಬಲ್ ಟೀ ಅಥವಾ ಗ್ರೀನ್ ಟೀ ಅನ್ನು ನಿಯಮಿತವಾಗಿ ಸೇವಿಸಬಹುದು. ಇದರಿಂದಲೂ ಕೂಡ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ನೀವು ಊಟವಾದ ಮೇಲೆ ಅಥವಾ ಉಪಹಾರ ಸೇವಿಸಿದ ನಂತರ ಅರ್ಧ ಕಪ್ ಹರ್ಬಲ್ ಟೀ ಸೇವಿಸಿದರೆ ಇನ್ಸುಲಿನ್ ಮಟ್ಟವು ಸುಧಾರಿಸುತ್ತದೆ. ದಾಸವಾಳ, ಶುಂಠಿ ಪುದೀನಾ, ಇವುಗಳನ್ನು ಒಳಗೊಂಡ ಗಿಡಮೂಲಿಕ ಚಹವನ್ನು ಕುಡಿಯುವುದು ಮಧುಮೇಹಗಳಿಗೆ ಒಳ್ಳೆಯದು.
ಬೇಸಿಗೆಯಲ್ಲಿ ಅಂತೂ ಹಸಿರು ಸ್ಮೂಥಿಗಳನ್ನು ಸೇವಿಸುವುದು ಒಳ್ಳೆಯದು. ಪಾಲಾಕ್, ಹಾಗಲಕಾಯಿ ಮೊದಲಾದ ತರಕಾರಿಗಳಿಂದ ತಯಾರಿಸಿದ ಸ್ಮೂಥಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಪ್ರೋಟೀನ್ ಪುಡಿ ಹಾಗೂ ಸ್ವಲ್ಪ ಹಣ್ಣುಗಳ ಜೊತೆಗೆ ಈ ಸ್ಮೂಥಿಗಳನ್ನು ಸೇವಿಸಬಹುದು. ಜೊತೆಗೆ ಸಕ್ಕರೆಯಿಲ್ಲದ ನಿಂಬೆ ಪಾನಕ, ಕಡಿಮೆ ಕೊಬ್ಬಿನಾಂಶ ಇರುವ ಹಾಲು ಹಾಗೂ ಹಸಿರು ತರಕಾರಿ ಜೊತೆಗೆ ಅತ್ಯುತ್ತಮ ಆಹಾರ ಕ್ರಮವನ್ನು ರೂಢಿಸಿಕೊಂಡರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು