ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ತೆಗೆದು ಹಾಕದಿದ್ದರೆ ಮಸೀದಿ ಮುಂದೆ ಹನುಮಾನ್ ಚಾಲೀಸಾ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, “ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಬಹುದು, ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಧ್ವನಿವರ್ಧಕಗಳನ್ನು ತೆಗೆದುಹಾಕಿ ಅದು ಸಾಧ್ಯವಾಗದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಅಳವಡಿಸಿ ಹನುಮಾನ್ ಚಾಲೀಸಾವನ್ನು ಹಾಕುತ್ತೇವೆ” ಎಂದು ಆಗ್ರಹಿಸಿದ್ದಾರೆ.
ಮುಂಬೈನ ಮುಸ್ಲಿಂ ಪ್ರದೇಶಗಳಲ್ಲಿರುವ ಮಸೀದಿಗಳ ಮೇಲೆ ದಾಳಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಠಾಕ್ರೆ ಮನವಿ ಮಾಡಿದ ಅವರು “ಅಲ್ಲಿ ವಾಸಿಸುವ ಜನರು “ಪಾಕಿಸ್ತಾನ ಬೆಂಬಲಿಗರು. ಮುಸ್ಲಿಂ ಗುಡಿಸಲುಗಳಲ್ಲಿರುವ ಮದರಸಾಗಳ ಮೇಲೆ ದಾಳಿ ಮಾಡುವಂತೆ ನಾನು ಪ್ರಧಾನಿಯಲ್ಲಿ ಕೇಳಿಕೊಳ್ಳುತ್ತೇನೆ. ಪಾಕಿಸ್ತಾನಿ ಬೆಂಬಲಿಗರು ಈ ಗುಡಿಸಲುಗಳಲ್ಲಿ ನೆಲೆಸಿದ್ದಾರೆ. ಮುಂಬೈ ಪೊಲೀಸರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದೆ. ನಮ್ಮ ಶಾಸಕರು ಅವರನ್ನು ಮತ ಬ್ಯಾಂಕ್ಗಾಗಿ ಬಳಸುತ್ತಿದ್ದಾರೆ, ಅಂತಹವರಿಗೆ ಆಧಾರ್ ಕಾರ್ಡ್ ಕೂಡ ಇಲ್ಲ. ಆದರೆ ಶಾಸಕರು ಅವರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.