




ವಾಷಿಂಗ್ಟನ್: ಒಮನ್ ಕರಾವಳಿಯಲ್ಲಿ 14 ಭಾರತೀಯರಿದ್ದ ದೋಣಿ ಮಗುಚಿ ದುರಂತ ಸಂಭವಿಸಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ಅರಿತ ಅಮೆರಿಕ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ ಎಂದು ವರದಿಯಾಗಿದೆ. ಸಮುದ್ರದಲ್ಲಿ ಮುಳುಗಿದ ದೋಣಿಯು ಸೋಹಾರ್ನಿಂದ ಮುಂಬೈಗೆ ತೆರಳುತ್ತಿತ್ತು.
ಸರ್ಕಾರಿ ಮೂಲಗಳ ಪ್ರಕಾರ, ಅಮೆರಿಕ ನೌಕಾಪಡೆಯು ಇಂದು ಬೆಳಗ್ಗೆ ಒಮನ್ ರಾಸ್ ಅಲ್ ಹಡ್ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಭಾರತೀಯರಿದ್ದ ದೋಣಿ ಅಪಾಯದಲ್ಲಿದೆ ಎಂಬ ಮಾಹಿತಿ ಪಡೆದುಕೊಂಡಿತು. ನಂತರ ಕಡಲ ಕಣ್ಗಾವಲು ಪಡೆ ಭಾರತೀಯ ನೌಕಾಪಡೆಗೆ ಎಚ್ಚರಿಕೆ ನೀಡಿತು.
ಈ ದೋಣಿಯಲ್ಲಿ 14 ಭಾರತೀಯರು ಇದ್ದರು ಎಂದು ವರದಿಗಳು ತಿಳಿಸಿವೆ. ನೀರು ದೋಣಿಯೊಳಕ್ಕೆ ನುಗ್ಗುತ್ತಿದ್ದಂತೆ ಯಾವ ಕ್ಷಣದಲ್ಲಾದರೂ ಸಂಪೂರ್ಣ ಮುಳುಗುವ ಪರಿಸ್ಥಿತಿ ಉಂಟಾಯಿತು. ದೋಣಿಯಲ್ಲಿದ್ದವರು ಸಹಾಯಕ್ಕಾಗಿ ಸಂದೇಶ ಕಳುಹಿಸಿದ ನಂತರ, ತುರ್ತು ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯುಎಸ್ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ಪರಿಸ್ಥಿತಿಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತವಾಯಿತು. ನಂತರ ಯುಎಸ್ ನೇವಿ ಪಿ-8 ಕಡಲ ಗಸ್ತು ವಿಮಾನವು ಹಡಗಿನ ಬಳಿ ಲೈಫ್ ರಾಫ್ಟ್ ಅನ್ನು ಇಳಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು.
ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ಒಮನ್ ಭಾರತೀಯ ರಾಯಭಾರ ಕಚೇರಿ, ದೋಣಿಯಲ್ಲಿದ್ದ ಎಲ್ಲಾ 14 ಮಂದಿ ಕೂಡ ಭಾರತೀಯ ಪ್ರಜೆಗಳು ಅನ್ನೋದು ತಿಳಿದುಬಂದಿದೆ. ತಕ್ಷಣದ ಸ್ಥಿತಿಗತಿ ತಿಳಿದುಬಂದಿಲ್ಲವಾದರೂ ರಕ್ಷಣಾ ಕಾರ್ಯಾಚರಣೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಒಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗು ಸಾಗಣೆ, ಸಮುದ್ರ ಕಾರ್ಯಾಚರಣೆ ಮತ್ತು ಹಾರ್ಮುಜ್ ಜಲಸಂಧಿಯು ವ್ಯಾಪಕ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.








