ಮಾಣಿ : ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವರ ಸಾನಿದ್ಯದ- ಜೀರ್ಣೋದ್ಧಾರ ಹಾಗೂ ಸ್ತಳಾಂತರಿಸಿ ಪುನರ್ ನಿರ್ಮಾಣ ಉದ್ದೇಶಿತ
ಧರ್ಮ ಜಾಗೃತಿ ಅಭಿಯಾನದ ಭಾಗವಾಗಿ ಹಮ್ಮಿಕೊಳ್ಳಲಾದ ಅಖಂಡ ಏಕಾಹ ಭಜನೆ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಕ್ಷೇತ್ರ ಅಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷರಾದ ಮಾಣಿಗುತ್ತು ಸಚಿನ್ ರೈಯವರು
ಆಮಂತ್ರಣ ಪತ್ರ ಹಾಗೂ ವಿಜ್ಞಾಪನಾ ಪತ್ರದ ಬಿಡುಗಡೆ ಮಾಡುವ ಮೂಲಕ ಅಖಂಡ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಾರಾಯಣ ರೈ ಕೊಡಾಜೆ, ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯರಾದ ದಿನಕರ ನಾಯಕ್ ನೇರಳಕಟ್ಟೆ, ರಾಮಕೃಷ್ಣ ಆಳ್ವ, ಗಿರಿಯಪ್ಪ ಪೂಜಾರಿ, ವೆಂಕಟರಮಣ ಪೈ, ಹರೀಶ್ ಮಾಣಿ, ನರಸಿಂಹ ಶೆಟ್ಟಿ, ಜನಾರ್ದನ ಪೂಜಾರಿ, ನಿತಿನ್ ಸಾಲ್ಯಾನ್, ಜಯ ಕುಲಾಲ್, ಭಾರತೀ ವಿಟಲಕೋಡಿ, ಜಯಂತ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಎಪ್ರಿಲ್ 8 ನೇ ಶನಿವಾರ ಸೂರ್ಯೋದಯದಿಂದ ಎಪ್ರಿಲ್ 9ನೇ ಆದಿತ್ಯವಾರ ಸೂರ್ಯೋದಯದವರೆಗೆ , ಕ್ಷೇತ್ರ ಅಭಿವೃದ್ಧಿ ಸಮಿತಿ ಹಾಗೂ ಊರ ಹತ್ತು ಸಮಸ್ತರ ಮತ್ತು ಊರ- ಪರವೂರಿನ ವಿವಿಧ ಭಜನಾ ಮಂಡಳಿಗಳ ಸಮ್ಮಿಲನದಲ್ಲಿ ಅಖಂಡ ಏಕಾಹ ಭಜನೆ ಕಾರ್ಯಕ್ರಮ ನೆರವೇರಲಿದೆ. ಪುರಾತನ ಅಜೀರ್ಣಾವಸ್ತೆಯಲ್ಲಿರುವ ದೇವಸ್ಥಾನ ರೈಲು ಮಾರ್ಗ ನಿರ್ಮಾಣದ ವೇಳೆ ಸಂಪೂರ್ಣವಾಗಿ ತೆರವುಗೊಂಡು
ಕಾಲಧರ್ಮದ ಹೊಡೆತಕ್ಕೆ ನಲುಗಿ ಜನ ಮಾನಸದಿಂದ ಕೆಲವು ದಶಕಗಳಿಂದ ದೂರ ಸರಿದಿತ್ತು.
ಕಳೆದ ಒಂದು ವರ್ಷದಿಂದ ಈ ದೇವಾಲಯ ಪರಿಸರದಲ್ಲಿ ಪ್ರತಿ ಆದಿತ್ಯವಾರ ಸಂಜೆ ಭಕ್ತಾದಿಗಳಿಂದ ಭಜನೆ ನಡೆಯುತ್ತದೆ. ಕೆಲವು ತಿಂಗಳುಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯ ನಿರ್ದೇಶನದಂತೆ ಇನ್ನು ಮುಂದಿನ ದಿನಗಳಲ್ಲಿ ಈ ಆರಾಧನಾ ಕೇಂದ್ರ ನೂತನ ದೇವಾಲಯ ಭೂ ನಿವೇಶನದಲ್ಲಿ ಮಠಾಯತನ ದೇವಾಲಯವಾಗಿ ಪುನರ್ನಿರ್ಮಾಣ ಮಾಡುವತ್ತ ಕ್ಷೇತ್ರ ಅಭಿವೃದ್ಧಿ ಸಮಿತಿ ಕಾರ್ಯಪ್ರವೃತ್ತವಾಗಿದೆ.