ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ರೈಲ್ವೇ ಬ್ರಿಡ್ಜ್ ಬಳಿ ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕಡೇಶ್ವಾಲಯ ಮುನ್ನಿಮಾರು ನಿವಾಸಿ ರಾಜೇಶ್(40) ಬಂಧಿತ ಆರೋಪಿ.
ಮಹಿಳೆಯೊಬ್ಬರು ಪುತ್ತೂರಿನಿಂದ ಬಂದು ಮಿತ್ತೂರಿನಲ್ಲಿ ಬಸ್ ನಿಂದ ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಸರ ಎಳೆದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಮಹಿಳೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸುಲಿಗೆ ಮಾಡಿದ 80000/- ಮೌಲ್ಯದ 20 ಗ್ರಾಂ ತೂಕದ ಕರಿಮಣಿ ಸರವನ್ನು ವಶವಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷಿಕೇಶ್ ಭಗವಾನ್ ಸೋನಾವಣೆ ಐಪಿಎಸ್ ರವರ ನಿರ್ದೇಶನದಂತೆ, ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಬಂಟ್ವಾಳ ಉಪವಿಭಾಗದ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ತೊರಟ್ ರವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್.ಈ, ಉಪ ನಿರೀಕ್ಷಕರಾದ ರುಕ್ಕ ನಾಯ್ಕ, ಪೊಲೀಸ್ ಹೆಡ್ ಕಾನ್ಸೆಬಲ್ ಗಳಾದ ಜಯರಾಮ ಕೆ.ಟಿ, ರಕ್ಷಿತ್, ಕರುಣಾಕರ, ಪೊಲೀಸ್ ಕಾನ್ಸೆಬಲ್ ಗಳಾದ ಹೇಮರಾಜ್, ಮನೋಜ್ ಕುಮಾರ್, ಜಟ್ಟಪ್ಪ ಭಾಗವಹಿಸಿದ್ದಾರೆ.