ಮೂಡಬಿದ್ರೆ ರಾಜಕೀಯದಲ್ಲಿ ಬಿಜೆಪಿ ವಿರುದ್ಧ ತಮ್ಮದೇ ಕಾರ್ಯಕರ್ತರು ಮಾತಾಡಿಕೊಳ್ಳುವಂತಾಗಿದೆ. ಮೂಡುಬಿದ್ರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ತಮ್ಮ ಬಗ್ಗೆ ಮಾನಹಾನಿ ಫೋಟೋ, ವಿಡಿಯೋ, ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತರಲು ಯತ್ನಿಸಿದ್ದು ಸಾಕಷ್ಟು ಚರ್ಚೆ ಸೃಷ್ಟಿ ಮಾಡಿದೆ.
ಮೂಡಬಿದ್ರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ತನ್ನ ವಿರುದ್ಧ ಆಕ್ಷೇಪಾರ್ಹ ಸುದ್ದಿ, ಮಾಹಿತಿ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಎಪ್ರಿಲ್ 10ರಂದು ತಾತ್ಕಾಲಿಕ ತಡೆಯಾಜ್ಞೆ ಆದೇಶ ನೀಡಲಾಗಿದೆ. ಉಮಾನಾಥ ಕೋಟ್ಯಾನ್ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶ ವಿಧಿಸಲಾಗಿದೆ. ಆದರೆ ಚುನಾವಣೆ ಹೊತ್ತಿಗೆ ಅದರಲ್ಲೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವುದಕ್ಕೂ ಮುನ್ನ ಈ ರೀತಿ ಕೋರ್ಟಿನಿಂದ ತಡೆಯಾಜ್ಞೆ ಕೋರಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೂಡಬಿದ್ರೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಕೂಡ ಇದೇ ರೀತಿ ಕೋರ್ಟಿನಿಂದ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಪ್ರಿಲ್ 11ರಂದು ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಸುದರ್ಶನ್ ಮೂಡುಬಿದ್ರೆ ಪರವಾಗಿ ವಕೀಲ ಚಿದಾನಂದ ಕೆದಿಲಾಯ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ.!
ಈ ರೀತಿಯ ಬೆಳವಣಿಗೆ ಸಾಕಷ್ಟು ಚರ್ಚೆ ಕಾರಣವಾಗಿದೆ. ಕಾಂಗ್ರೆಸ್ ಪಾಳಯಕ್ಕೆ ಬಿಜೆಪಿಯ ಕೆಲ ನಾಯಕರು ಮಾಡುವ ಅವಾಂತರಗಳು ಕೈ ಸಿಕ್ಕರೆ ಕೇಳುವುದೇ ಬೇಡ. ಈ ಹಿಂದೆ ರಾಜ್ಯ ರಾಜಕೀಯದಲ್ಲಿ ನಡೆದ ಸಾಕಷ್ಟು ವಿದ್ಯಾಮಾನಗಳು ಬಿಜೆಪಿ ಪಾಳಯಕ್ಕೆ ಮುಜುಗರ ಉಂಟುಮಾಡಿದೆ. ಬಿಜೆಪಿಯನ್ನು ಬ್ಲೂಜೆಪಿ ಅಂತ ಕಾಂಗ್ರೆಸ್ ಕುಹಕ ಆಡುತ್ತಿದೆ. ಸಿಡಿ ಬಿಡುಗಡೆಯ ನಂತರ ಕೇಸರಿ ನಾಯಕರಿಗೆ ಸಾಕಷ್ಟು ಮುಜುಗರ ಉಂಟುಮಾಡಿತ್ತ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಆ ಮೂಲಕ ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿ, ಮಾಹಿತಿ, ಅಶ್ಲೀಲ, ಖಾಸಗಿ ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು ಉಲ್ಲೇಖನೀಯ.
ಗೌಡರ ವಿಡಿಯೋ ಫೋಟೋ ವೈರಲ್..!
ಈ ಹಿಂದೆ ಸದಾನಂದ ಗೌಡ ಅವರದ್ದು ಎಂದು ಹೇಳಲಾದ ವಿಡಿಯೋ ವೈರಲ್ ಆಗಿತ್ತು. ಚುನಾವಣೆ ಹೊಸ್ತಿಲಲ್ಲಿರುವಾಗ ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಂದಿಗಿರುವ ಫೋಟೋ ಎಂದು ಹೇಳಲಾದ ಫೋಟೋಗಳು ವೈರಲ್ ಆಗಿದ್ದವು. ಇದು ಭಾರೀ ಸಂಚಲನ ಸೃಷ್ಟಿಸಿತ್ತು.
ಮೂಡಬಿದ್ರೆಯ ಬಿಜೆಪಿ ನಾಯಕರು ಇಷ್ಟೊಂದು ಹೆದರುವುದೇಕೆ?
ಉಮಾನಾಥ ಕೋಟ್ಯಾನ್ ಈಗಾಗಲೇ ತನ್ನ ವಿರುದ್ಧ ಆಕ್ಷೇಪಾರ್ಹ ಸುದ್ದಿ, ಮಾಹಿತಿ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು ಯಾಕೆ.? ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅದೇ ದಾರಿಯನ್ನು ಅನುಸರಿಸುತ್ತಿರುವುದು ಯಾಕೆ? ಕುಂಬಳ ಕಾಯಿ ಕಳ್ಳನಂತೆ ವರ್ತಿಸುವುದು ಯಾಕೆ? ಒಂದು ವೇಳೆ ಸಭ್ಯವಾಗಿ ಇದ್ದರೆ ಹೆದರಿಕೊಳ್ಳುವ, ಮಾಧ್ಯಮಕ್ಕೆ ಹೆದರುವ ಅವಶ್ಯಕತೆ ಇತ್ತಾ? ಇವರು ಇಷ್ಟೊಂದು ಭಯಗೊಳ್ಳುವುದು ಆದರೆ ಇದರ ಹಿಂದೆ ಏನೋ ನಡೆದಿದೆ ಅನ್ನುವುದು ಕೂಡ ಅಷ್ಟೇ ಸತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಚರ್ಚೆ ಆರಂಭಿಸಿದ್ದಾರೆ. ಇದಲ್ಲದೆ, ಇತರೇ ಕೆಲವು ನಾಯಕರು ಕೂಡ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಆಗದಂತೆ ಕೋರ್ಟಿನಿಂದ ತಡೆಯಾಜ್ಞೆ ತರಲು ಮುಂದಾಗಿದ್ದಾರೆ ಎನ್ನುವ ಮಾಹಿತಿಗಳಿವೆ.
ಬಿಜೆಪಿ ಕಾರ್ಯಕರ್ತರಿಂದ ನೋಟಾ ಅಭಿಯಾನ
ಇದನ್ನೆಲ್ಲಾ ತಿಳಿದುಕೊಂಡಿರುವ ನಿಷ್ಠಾವಂತ, ಪಕ್ಕಾ ಹಿಂದುತ್ವವಾದಿ ಬಿಜೆಪಿ ಕಾರ್ಯಕರ್ತರು ಆಚೆ ಕಾಂಗ್ರೆಸ್ಗೂ ಬೆಂಬಲ ಕೊಡದೆ, ಈಚೆ ಬಿಜೆಪಿಗೂ ಬೆಂಬಲ ನೀಡದೆ ನೋಟಾ ಚಲಾಯಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯಕ್ಕೆ ಬೂದಿ ಮುಚ್ಚಿದ ಕೆಂಡ ಎಂಬಂತಿದೆ.