ಮೂಡುಬಿದಿರೆ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ವಿಪರೀತ ಜ್ವರದಿಂದ ಮೃತಪಟ್ಟಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ಪುರಸಭೆ ವ್ಯಾಪ್ತಿಯ ಜ್ಯೋತಿ ನಗರದ ಮಯ್ಯದ್ದ-ರಮ್ಲಾತ್ ದಂಪತಿಯ ದ್ವಿತೀಯ ಪುತ್ರಿ, ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಮಿಸ್ರಿಯಾ(17) ಮೃತ ವಿದ್ಯಾರ್ಥಿನಿ. ಕೆಲವು ದಿನಗಳಿಂದ ಆಕೆ ವಿಪರೀತ ಜ್ವರದಿಂದ ಬಳಲುತ್ತಿದ್ದು, ಬಿಳಿ ರಕ್ತ ಕಣಗಳ ಕುಸಿತ ಸಮಸ್ಯೆ ಉಲ್ಬಣಿಸಿ ರವಿವಾರ ರಾತ್ರಿ ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ. ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ.
ಈ ಕುರಿತು ಪ್ರತಿಕ್ರೀಯೆ ನೀಡಿದ ತಾ| ಆರೋಗ್ಯಾಧಿಕಾರಿ ಡಾ| ಸುಜಯ್ ಭಂಡಾರಿ ಅವರು, ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸಹಿತ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದಲ್ಲಿ ಕೂಡಲೇ ಮಾಹಿತಿ ಲಭಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಮಲೇರಿಯಾ ಕೇಂದ್ರಕ್ಕೆ ವರದಿ ಬಂದ ಬಳಿಕವಷ್ಟೇ ನಮಗೆ ಮಾಹಿತಿ ಸಿಗಲು ಸಾಧ್ಯ ಮತ್ತು ಆ ಕುರಿತು ಸೂಕ್ತ ಸಮೀಕ್ಷೆ, ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಮಿಸ್ರಿಯಾ ಪ್ರಕರಣ ಇನ್ನಷ್ಟೇ ಮಲೇರಿಯಾ ಕೇಂದ್ರಕ್ಕೆ ವರದಿಯಾಗಬೇಕಿದೆ. ಡೆಂಗ್ಯೂನಿಂದ ಈ ಸಾಲಿನಲ್ಲಿ ಇದುವರೆಗೆ ಮೂಡುಬಿದಿರೆ ತಾಲೂಕಿನಲ್ಲಿ ಸಾವಿನ ಪ್ರಕರಣ ದಾಖಲಾಗಿಲ್ಲ. ಇದು ಡೆಂಗ್ಯೂನಿಂದಾದ ಸಾವು ಎಂದು ದೃಢಪಟ್ಟಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಇದೇ ಈ ಸಾಲಿನ ಮೊದಲ ಪ್ರಕರಣ. ಈ ಬಗ್ಗೆ ತತ್ಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.