ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯನ್ನೇ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಗಾಜಿಪುರ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಬರ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಪ್ನಾ ಮೃತಪಟ್ಟ ಮಹಿಳೆ ಹಾಗೂ ಮೋಹಿತ್ ಕುಮಾರ್ ಬಂಧಿತ ಆರೋಪಿ.
ಸ್ವಪ್ನಾ ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸದೇ ಬಂದ ಕಾರಣಕ್ಕೆ ಆರೋಪಿ ಮೋಹಿತ್ ಕುಮಾರ್ ಸಿಟ್ಟಾಗಿದ್ದಾನೆ. ಈ ವಿಚಾರವಾಗಿ ಸ್ವಪ್ನಾ ಹಾಗೂ ಮೋಹಿತ್ ಕುಮಾರ್ ಮಧ್ಯೆ ಜಗಳ ನಡೆದಿದ್ದು, ಪದೇ ಪದೇ ಎಚ್ಚರಿಕೆ ನೀಡಿದರೂ ಪತ್ನಿ ಕಿವಿಗೊಡುತ್ತಿಲ್ಲ ಎಂದು ಆಕ್ರೋಶಗೊಂಡ ಪತಿ ಮೋಹಿತ್ ಕುಮಾರ್, ಸ್ವಪ್ನಾಳ ಕುತ್ತಿಗೆಗೆ ಚಾಕುವಿನಿಂದ ಸೀಳಿ ಹತ್ಯೆ ಮಾಡಿದ್ದಾನೆ.
ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸ್ವಪ್ನಾಳ ಮೃತದೇಹದ ಪಕ್ಕದಲ್ಲಿ ಮೋಹಿತ್ ಕುಮಾರ್ ಕುಳಿತಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸರ್ಕಲ್ ಅಧಿಕಾರಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.