
ರಾಜ್ಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ರಾಜ್ಯ ಸಭೆಯ 72 ಸಂದರ ಸದಸ್ಯತ್ವ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಮಾಡಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಬೀಳ್ಕೊಡುಗೆ ಭಾಷಣ ಮಾಡಿ, ನಿವೃತ್ತರಾಗುತ್ತಿರುವ ಪ್ರತಿಯೊಬ್ಬ ಸದಸ್ಯರ ಅನುಭವಕ್ಕೂ ಅದರದ್ದೇ ಆದ ಮಹತ್ವವಿದೆ. ಕೆಲವೊಮ್ಮೆ ಶೈಕ್ಷಣಿಕ ಜ್ಞಾನಕ್ಕಿಂತಲೂ ಅನುಭವವೇ ಮಿಗಿಲಾಗಿರುತ್ತದೆ. ಇದೀಗ ನಿವೃತ್ತರಾಗುತ್ತಿರುವ ರಾಜ್ಯ ಸಭೆ ಸದಸ್ಯರ ಅನುಭವವಗಳು ರಾಷ್ಟ್ರಹಿತಕ್ಕೆ ಬಳಕೆಯಾಗಲಿ. ಮತ್ತೆ ಬನ್ನಿ ಎಂದು ನಾನು ಅವರಿಗೆ ಆಹ್ವಾನ ನೀಡಲು ಬಯಸುತ್ತೇನೆ ಎಂದು ಹೇಳಿದರು.
ಹಾಗೇ, ನಾವು ಈ ಸಂಸತ್ತಿನಲ್ಲಿ ಸುದೀರ್ಘ ಸಮಯದಿಂದಲೂ ಒಟ್ಟಿಗಿದ್ದೇವೆ. ಈ ಸದನಕ್ಕೆ ನಾವು ಕೊಟ್ಟದ್ದಕ್ಕಿಂತ ಹೆಚ್ಚಿನದನ್ನು ಸಂಸತ್ತು ನಮಗೆ ನೀಡಿದೆ. ಹಾಗಾಗಿ ಇಲ್ಲಿ ಪಡೆದ ಅನುಭವವನ್ನು ಪ್ರತಿಯೊಬ್ಬರೂ ಈ ದೇಶದ ನಾಲ್ಕೂ ದಿಕ್ಕಿಗೆ ಪಸರಿಸಿ, ದೇಶಕ್ಕೆ ಒಳ್ಳೆಯದನ್ನು ಮಾಡಬೇಕು ಎಂದೂ ಪ್ರಧಾನಿ ಹೇಳಿದರು.

ಈ ಬಾರಿ ಒಟ್ಟು 72 ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಅದರಲ್ಲಿ ಏಪ್ರಿಲ್ನಲ್ಲಿ ಕಾಂಗ್ರೆಸ್ನ ಆನಂದ್ ಶರ್ಮಾ, ಎ.ಕೆ.ಅಂತೋನಿ, ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ, ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡಿದ್ದ ಎಂ.ಸಿ.ಮೇರಿ ಕೋಮ್, ಸ್ವಪನ್ ದಾಸ್ಗುಪ್ತಾ ಸದಸ್ಯತ್ವ ಅವಧಿ ಮುಕ್ತಾಯವಾದರೆ, ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂ.ಜೆ.ಅಕ್ಬರ್, ಜೈರಾಮ್ ರಮೇಶ್, ವಿವೇಕ್ ಟಂಖಾ, ವಿ.ವಿಜಯಸಿ ರೆಡ್ಡಿಯವರು ಜೂನ್ನಲ್ಲಿ ನಿವೃತ್ತಿಯಾಗಲಿದ್ದಾರೆ. ಹಾಗೇ ಜುಲೈನಲ್ಲಿ ಪಿಯುಷ್ ಗೋಯೆಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿ. ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಸತೀಶ್ ಚಂದ್ರ ಮಿಶ್ರಾ, ಸಂಜಯ್ ರಾವತ್, ಪ್ರಫುಲ್ ಪಟೇಲ್ ಮತ್ತು ಕೆ.ಜೆ. ಅಲ್ಫೋನ್ಸ್ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಳ್ಳಲಿದೆ. ಇದರಲ್ಲಿ ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದು, ಕೇಂದ್ರದಲ್ಲಿ ಮಂತ್ರಿಸ್ಥಾನ ಹೊಂದಿರುವವರನ್ನು ಆಡಳಿತ ಬಿಜೆಪಿ ಪಕ್ಷ ಮರುನಾಮನಿರ್ದೇಶನ ಮಾಡಲಿದೆ. ಆದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದ್ಯರ ಬಗ್ಗೆ ಇನ್ನೂ ಮಾಹಿತಿ ಇಲ್ಲ.











