ಮಂಗಳೂರು: ಶಿವಮೊಗ್ಗ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯನ್ನು ದಿ.ಶರತ್ ಮಡಿವಾಳ ತಂದೆ ಖಂಡಿಸಿದ್ದಾರೆ.
2017 ರಲ್ಲಿ ಬಂಟ್ವಾಳದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಹತ್ಯೆಯಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಎಸ್.ಡಿ.ಪಿ.ಐ , ಪಿಎಫ್ಐ ಖಂಡಿಸಿ ಎಂದು ಬಿಜೆಪಿಯನ್ನು ಒತ್ತಾಯಿಸಿದ್ದಾರೆ.
ನನ್ನ ಮಗನ ಕೊಂದ ರೀತಿಯೇ ಹರ್ಷನನ್ನು ಕೊಲೆ ಮಾಡಲಾಗಿದೆ, ನನ್ನ ಕುಟುಂಬಕ್ಕೆ ಬಂದ ಪರಿಸ್ಥಿತಿ ಹರ್ಷ ಕುಟುಂಬಕ್ಕೆ ಬರಬಾರದು.
ಮಗನನ್ನು ಕಳೆದುಕೊಂಡ ನಂತರ ಆಗುವ ವೇದನೆಯನ್ನು ಅನುಭವಿಸಿದ್ದೇನೆ.
ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಎರಡೂ ಕಡೆಯೂ ಬಿಜೆಪಿಯೇ ಇದೆ, ಈಗಲಾದರೂ ಎಸ್.ಡಿ.ಪಿ.ಐ , ಪಿಎಫ್ಐ ನಿಷೇಧಿಸಿ ಎಂದರು. ಹಿಂದೂಗಳಿಗೆ ಎಸ್ಡಿಪಿಐ, ಪಿಎಫ್ಐ , ಸಿಎಫ್ಐ ಮಾರಕ ಅದನ್ನು ಈಗಲೇ ನಿಷೇಧಿಸಿ ಎಂದು ಒತ್ತಾಯಿಸಿದರು.
ನನ್ನ ಕುಟುಂಬದ ಕೈ ಬಿಟ್ಟಾಗೆ ಹರ್ಷ ಕುಟುಂಬದ ಕೈ ಬಿಡಬಾರದು ಅವರ ತಂದೆಗೂ ಹೆಣ್ಣು ಮಕ್ಕಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹರ್ಷ ಕುಟುಂಬಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ರಾಜ್ಯ ಸರ್ಕಾರ ಮಾಡಬೇಕು.
ನನ್ನ ಮಗ ಶರತ್ ಕೊಲೆಯಾದ ಸಂಧರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು , ಆ ಸಂಧರ್ಭದಲ್ಲಿ ಸರ್ಕಾರ ನನಗೆ ಯಾವುದೇ ಸಹಾಯ ಮಾಡಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರ ಇದೆ, ಹರ್ಷ ಕುಟುಂಬವನ್ನು ಕೈ ಬಿಡಬಾರದು ಎಂದರು.
ಬಿಜೆಪಿಯವರು ಸಹಾಯ ಮಾಡಿಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಬಿಜೆಪಿಯವರು ಅಳಿಲು ಸೇವೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.