ಬೆಳ್ತಂಗಡಿ: ವೃತ್ತಿಯಲ್ಲಿ ರೇಡಿಯೋ ಜಾಕಿಯಾದರೂ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಉಳ್ಳಾಲ್ ಗೆ 2021ರ “ಹೃದಯವಂತ ಪ್ರಶಸ್ತಿ ” ಲಭಿಸಿದೆ.
ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಪರಿಸರ ಪ್ರೇಮಿ ಹಾಗೂ ಸಮಾಜ ಸೇವೆಯಲ್ಲಿ ನಿರತರಾಗಿರುವ ರಶ್ಮಿ ಸಾಕಷ್ಟು ಅನಾಥ ಮಕ್ಕಳ ಹಸಿವು ನೀಗಿಸಿದ್ದು, ಎಷ್ಟೋ ವೃದ್ಧರ ಪಾಲಿಗೆ ಮಗಳ ಸ್ಥಾನದಲ್ಲಿ ನಿಂತು ಅವರಿಗೆ ಪ್ರೀತಿ ನೀಡಿದ್ದಾರೆ. ಬಾಲಾಶ್ರಮ ಹಾಗೂ ವೃದಾಶ್ರಮಕ್ಕೆ ಅಗತ್ಯ ವಿರುವ ವಸ್ತುಗಳ ಪೂರೈಕೆ ಜೊತೆಗೆ ಮನೋರಂಜನಾ, ಹಾಗೂ ಆಶ್ರಮದ ಮಕ್ಕಳಿಗೆ ಶಿಕ್ಷಣದ ಮೌಲ್ಯವನ್ನು ತಿಳಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಪರಿಸರ ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ರಶ್ಮಿಗೆ ಈ ಪ್ರಶಸ್ತಿ ನೀಡುತ್ತಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ 14ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ನೀಡುವ ಹೃದಯವಂತ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರದಾನ ಮಾಡಲಿದ್ದಾರೆ.
ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುವ ರಶ್ಮಿ ತಮ್ಮ ವಿವಾಹದಂದು ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದು, ಇದರಿಂದ ಬಹಳಷ್ಟು ಜನರು ಪ್ರೇರಣೆ ಪಡೆದು 2000ಕ್ಕೂ ಹೆಚ್ಚು ಜನರು ಅವರವರ ಶುಭ ಕಾರ್ಯಗಳಲ್ಲಿ ಸಸಿ ವಿತರಿಸಿದ್ದಾರೆ. ಜನರಿಗೆ ಶುಭಕಾರ್ಯದಲ್ಲಿ ಗಿಡ ನೆಡುವ ತಿಳುವಳಿಕೆ ನೀಡುವ ಕೆಲಸ ಮಾಡಿದ್ದಾರೆ.
ಜೊತೆಗೆ ಬರವಣಿಗೆಯಲ್ಲೂ ಗುರುತಿಸಿಕೊಂಡಿದ್ದು ಮರಕ್ಕೊಂದು ಪುನರ್ಜನ್ಮ, ಪಶ್ಚಿಮ ಘಟ್ಟ ಎಂಬ ಸ್ವರ್ಗ, ಪ್ರಕೃತಿಯ ವಿರುದ್ಧ ಯಾವತ್ತೂ ಹೋಗದಿರೋಣ ಶೀರ್ಷಿಕೆ ಹೊಂದಿರುವ ಬಹುತೇಕ ಬರವಣಿಗೆ ಸಾಮಾಜಿಕ ಜಾಗ್ರತಿಯ ಕಳಕಳಿಯಿಂದ ಕೂಡಿದ್ದು 100ಕ್ಕೂ ಹೆಚ್ಚು ಲೇಖನಗಳು ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಮಂಗಳೂರಿನ ಬಹಳಷ್ಟು ಬೃಹತ್ ವೇದಿಕೆ ಯಲ್ಲಿ ಮುಖ್ಯ ಅತಿಥಿಯಾಗಿ ಕಾಣಿಸಿ ಕೊಂಡಿದ್ದು, ಬದುಕಿನ ದಾರಿ, ಪ್ರಕೃತಿ ಸಂರಕ್ಷಣೆ, ಪ್ರಕೃತಿ ಮಹತ್ವ, ಸೀಡ್ ಬಾಲ್ ಅಭಿಯಾನ, ಹೀಗೆ ಪ್ರಕೃತಿಯ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸಿರುತ್ತಾರೆ ರಶ್ಮಿ ಉಳ್ಳಾಲ್.