

ಬಾಗಲಕೋಟೆ: ಟಗರಿನ ಕಾಳಗದಲ್ಲಿ ಚಿನ್ನ, ಬೆಳ್ಳಿ ಅಷ್ಟೇ ಅಲ್ಲದೇ ₹10 ಲಕ್ಷ ಗಳವರೆಗಿನ ನಗದು ಬಹುಮಾನ ಗಿಟ್ಟಿಸಿಕೊಂಡಿದ್ದ ಟಗರು ಸಾವನ್ನಪ್ಪಿದ ಘಟನೆ ನಡೆದಿದೆ. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಲವ್ಲಿ ಬಾಯ್ ನಾಮಾಂಕಿತ ಟಗರು ಅಪಾರ ಅಭಿಮಾನಿ ಸಮೂಹವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಬೆಳೆಸಿದೆ.

₹8 ಲಕ್ಷ ಬೆಲೆಬಾಳುತ್ತಿದ್ದ ‘ಲವ್ಲಿ ಬಾಯ್’ ಟಗರು ಸೀಗಿಕೇರಿ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದೆ. ಕಲಾವಿದ, ನಾಟಕಕಾರ ಎಚ್.ಎನ್.ಶೇಬನ್ನವರ ಟಗರು ಅಪಾರ ಹೆಸರುವಾಗಿತ್ತು. ಎಲ್ಲಿ ಸ್ಪರ್ಧೆ ಮಾಡಿದರೂ ಲವ್ಲಿ ಬಾಯ್ಗೆ ಗೆಲುವು ಕಟ್ಟಿಟ್ಟ ಬುತ್ತಿ. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಕೊಟ್ಟಿದ್ದ ‘ಲವ್ಲಿ ಬಾಯ್’ ಚಿನ್ನ, ಬೆಳ್ಳಿ ಅಷ್ಟೇ ಅಲ್ಲದೇ ₹10 ಲಕ್ಷ ಗಳವರೆಗಿನ ನಗದು ಬಹುಮಾನ ಗಿಟ್ಟಿಸಿಕೊಂಡಿತ್ತು.

ಬೈಕು, ಹೋರಿ, ಪ್ರಶಸ್ತಿ ಪತ್ರ.. .ಹೀಗೆ ಸಾಲು ಸಾಲು ಬಹುಮಾನಗಳನ್ನು ತಂದಿತ್ತು. ₹8 ಲಕ್ಷ ಬೆಲೆಗೆ ಕೇಳಿದ್ದರೂ ಮಾಲಿಕ ಶೇಬನ್ನವರ ಟಗರು ಮಾರಿರಲಿಲ್ಲ. 6 ವರ್ಷ ವಯಸ್ಸಿನ ಟಗರನ್ನು ನೋಡಲು ಅಭಿಮಾನಿಗಳ ದಂಡೇ ಸೇರುತ್ತಿತ್ತು. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಟಗರು ಸಾವಿಗೀಡಾಗಿದ್ದು ಮಾಲಿಕ ಶೇಬನ್ನವರ ದುಃಖದ ಮಡುವಿನಲ್ಲಿದ್ದಾರೆ.

ಶ್ರದ್ಧಾಂಜಲಿ: ಸೀಗಿಕೇರಿ ಗ್ರಾಮದಲ್ಲಿ ಮೃತ ಟಗರಿಗೆ ಶ್ರದ್ಧಾಂಜಲಿ ನಡೆಯಿತು. ಮಾಲೆ, ಹಣೆಗೆ ಬೆಳ್ಳಿ, ಬಂಗಾರದ ಖಡಗ, ಭಂಡಾರ ಬಳಿದು ಪ್ರಶಸ್ತಿಗಳನ್ನು ಅದರ ಮುಂದಿಟ್ಟು ಊರಿನವರು, ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳ ಮಹಾಪೂರವೇ ಗ್ರಾಮಕ್ಕೆ ಹರಿದು ಬಂದಿದ್ದು, ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

