ಬಾಗಲಕೋಟೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಇದ್ದ ಕಾರು ಹುನಗುಂದ ತಾಲ್ಲೂಕಿನ ಕಳಸದ ಮಾರ್ಗ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಡಿಕ್ಕಿ ಹೊಡೆದು ರೈತರೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಅಪಘಾತದ ನಂತರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ, ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಕಾರಿನಲ್ಲಿದ್ದವರು ಅಲ್ಲಿಂದ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಾಗಲಕೋಟೆ ತಾಲ್ಲೂಕು ಚಿಕ್ಕ ಹಂಡರಗಲ್ ಗ್ರಾಮದ ನಿವಾಸಿ ಕೂಡ್ಲೆಪ್ಪ ಹನುಮಪ್ಪ ಬೋಳಿ (55) ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಹೊಲಕ್ಕೆ ತೆರಳಿದ್ದ ಅವರು ವಾಪಸ್ ಬೈಕ್ನಲ್ಲಿ ಮನೆಗೆ ಮರಳುವಾಗ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ವೇಳೆ ಕೆಳಗೆ ಬಿದ್ದು ತೀವ್ರ ಗಾಯಗೊಂಡ ಅವರನ್ನು ಆಂಬುಲೆನ್ಸ್ನಲ್ಲಿ ಬಾಗಲಕೋಟೆಯ ಗುಳೇದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿಯೇ ಅವರು ಸಾವಿಗೀಡಾಗಿದ್ದಾರೆ ತಿಳಿದುಬಂದಿದೆ.
ಕಾರು ಬೆಂಗಳೂರಿನಿಂದ ಇಳಕಲ್, ವಿಜಯಪುರ ಮಾರ್ಗವಾಗಿ ಅಥಣಿಗೆ ಹೊರಟಿತ್ತು. ಅಪಘಾತದ ನಂತರ ಚಿದಾನಂದ ಸವದಿ ಬೇರೊಂದು ವಾಹನದಲ್ಲಿ ಅಲ್ಲಿಂದ ತೆರಳಲು ಮುಂದಾದರು. ಆಗ ಅಲ್ಲಿಗೆ ಬಂದ ಅಕ್ಕಪಕ್ಕದ ಹೊಲದವರು ಹಾಗೂ ಹಂಡರಗಲ್ಲ ಗ್ರಾಮಸ್ಥರು ತಡೆದರು. ಆಗ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಅಪಘಾತ ನಡೆದ ನಂತರ ಜನರು ಸೇರಿದ್ದರಿಂದ ಕಾರಿನಲ್ಲಿ ಇದ್ದವರು ವಾಹನ ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಕಾರು ಡಿಸಿಎಂ ಲಕ್ಷ್ಮಣ ಸವದಿ ಅವರ ಕುಟುಂಬಕ್ಕೆ ಸೇರಿದೆ. ಆದರೆ ಅಪಘಾತ ನಡೆದ ವೇಳೆ ಕಾರಿನಲ್ಲಿ ಸವದಿ ಪುತ್ರ ಚಿದಾನಂದ ಇದ್ದರೋ, ಬೇರೆ ಯಾರು ಇದ್ದರೋ ಎಂಬುದು ಗೊತ್ತಿಲ್ಲ. ಆದರೆ ಕಾರು ಚಾಲಕ ಹನುಮಂತ ಸಿಂಗ್ ರಜಪೂತ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ’ ಎಂದು ಹುನಗುಂದ ವೃತ್ತ ನಿರೀಕ್ಷಕ ಹೊಸಕೇರಪ್ಪ ಕೊಳ್ಳೂರ ತಿಳಿಸಿದರು.