ಬೆಂಗಳೂರು: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಇದುವರೆಗೆ ಪ್ರಶಾಂತ್ ಮಾಡಾಳ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ.
ಗುರುವಾರ ರಾತ್ರಿಯಿಂದಲೇ ಪ್ರಶಾಂತ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಬರೋಬ್ಬರಿ 6 ಕೋಟಿ ಬೇಟೆಯಾಡಿದ್ದು, ಪ್ರಶಾಂತ್ ಮಾಡಾಳ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಅವರ ಮೇಲೆ ಗುರುವಾರ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಳಿ ನಡೆಸಿದ್ದು, ಗುತ್ತಿಗೆದಾರರೊಬ್ಬರಿಂದ 40 ಲಕ್ಷ ರೂ. ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಬಳಿಕ ಅವರ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆರು ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಗುತ್ತಿಗೆದಾರರೊಬ್ಬರಿಂದ ಪ್ರಶಾಂತ್ ಅವರು 80 ಲಕ್ಷ ರೂ.ಗಳಿಗೂ ಅಧಿಕ ಹಣದ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 40 ಲಕ್ಷ ರೂ. ಗಳನ್ನು ಪಡೆದುಕೊಳ್ಳುತ್ತಿರುವ ವೇಳೆಯೇ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಅಧ್ಯಕ್ಷರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯೂಎಸ್ಎಸ್ ಬಿ) ಮುಖ್ಯ ಅಕೌಂಟೆಂಟ್ ಆಗಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದ್ದು, ಇವರ ಬಳಿ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪ್ರಶಾಂತ್ ಮಾಡಾಳ್ ಈ ಬಗ್ಗೆ ಏನನ್ನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.
ಇನ್ನು ಕ್ರೆಸೆಂಟ್ ರಸ್ತೆಯ ಕಚೇರಿ ಹಾಗೂ ಸಂಜಯನಗರದ ಮನೆಯಲ್ಲಿಯೂ ಹಣ ಪತ್ತೆಯಾಗಿದೆ. ಕೆಎಸ್ಡಿಎಲ್ ಎಂಡಿ ಮನೆಯ ಮೇಲೆ ಕೂಡ ದಾಳಿ ಮಾಡಿರುವ ಲೋಕಾ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಸದ್ಯ ಪ್ರಶಾಂತ್ ಮಾಡಾಳ್ ಅರೆಸ್ಟ್ ನಿಂದ ಅಪ್ಪನಿಗೆ ಕಂಟಕ ಸಾಧ್ಯತೆ ಇದೆ. ಈ ಸಂಬಂಧ ವಿರೂಪಾಕ್ಷಪ್ಪ ಮಾಡಾಳ್ ಗೂ ತನಿಖೆ ಬಿಸಿ ತಟ್ಟಿದ್ದು, ನೋಟಿಸ್ ಕೊಟ್ಟು ಶಾಸಕರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ.